ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 24 : ಚಿತ್ತಾಪುರದಲ್ಲಿ ನಡೆದ ತಿರಂಗಾಯಾತ್ರೆ ಸಂದರ್ಭದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿರವರ ಕಾರಿಗೆ ಮಸಿ ಬಳಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕಾ ಖರ್ಗೆ ವಿರುದ್ದ ಕಾಂಗ್ರೆಸ್ ಕಚೇರಿ ಎದುರು ಧಿಕ್ಕಾರಗಳನ್ನು ಕೂಗಿದ ಛಲವಾದಿ ಮುಖಂಡ ತಿಪ್ಪೇಸ್ವಾಮಿಯನ್ನು ಪೊಲೀಸರು ಶನಿವಾರ ಬಂಧಿಸಿ ಬಡಾವಣೆ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಛಲವಾದಿ ನಾರಾಣಸ್ವಾಮಿ ಹಾಗೂ ಬೆಂಬಲಿಗರನ್ನು ಕೆಲವು ಕಾಲ ಐ.ಬಿ.ಯಲ್ಲಿ ಕೂಡಿ ಹಾಕಿ ಕಾಂಗ್ರೆಸ್ ಗೂಂಡಾಗಳು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೌರ್ಜನ್ಯ, ದಬ್ಬಾಳಿಕೆ ಜಾಸ್ತಿಯಾಗುತ್ತಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಛಲವಾದಿ ನಾರಾಯಣಸ್ವಾಮಿರವರನ್ನೆ ಈ ರೀತಿ ಕೇವಲವಾಗಿ ನಡೆಸಿಕೊಂಡರೆ ಇನ್ನು ಜನಸಾಮಾನ್ಯರ ಪಾಡೇನು? ಸಚಿವ ಪ್ರಿಯಾಂಕಾ ಖರ್ಗೆ ನೈತಿಕ ಹೊಣೆಹೊತ್ತು
ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ಕಚೇರಿಗೆ ಒಂಟಿಯಾಗಿ ನುಗ್ಗಲೆತ್ನಿಸಿದ ತಿಪ್ಪೇಸ್ವಾಮಿ ಛಲವಾದಿಯನ್ನು ಹತ್ತಕ್ಕೂ ಹೆಚ್ಚು ಮಂದಿ ಪೊಲೀಸರು ಸುತ್ತುವರೆದು ಬಂಧಿಸಿದರು.
ಎಂ.ಕೆ.ನಟರಾಜ್, ಪ್ರದೀಪ್, ಆನಂದ್ ಪೈಲೆಟ್ ಇವರುಗಳು ಕಾಂಗ್ರೆಸ್ ಕಚೇರಿಗೆ ನುಗ್ಗಲೆತ್ನಿಸುತ್ತಿದ್ದುದನ್ನು ಮೊದಲೆ ಅರಿತ ಪೊಲೀಸರು ಕಾಂಗ್ರೆಸ್ ಕಚೇರಿ ಎದುರು ಬ್ಯಾರಿಕೇಡ್ಗಳನ್ನು ಅಡ್ಡ ಇಟ್ಟು ಕಾವಲು ಕಾಯುತ್ತಿದ್ದರು.

