ಚಿತ್ರದುರ್ಗ | ಅಳತೆಯಲ್ಲಿ ಮೋಸ ಮಾಡಿದರೆ ಸೂಕ್ತ ಕ್ರಮ : ಹೂ ಬೆಳೆಗಾರರು ಮತ್ತು ವರ್ತಕರ ಸಭೆಯಲ್ಲಿ ನಿರ್ಣಯ

1 Min Read

ಚಿತ್ರದುರ್ಗ. ಜೂನ್.25 : ಚಿತ್ರದುರ್ಗ ಕೃಷಿ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ ಸಗಟು ಹೂವಿನ ಮಾರುಕಟ್ಟೆಯಲ್ಲಿ ಹೂವುಗಳನ್ನು ಮಾರಾಟಕ್ಕಾಗಿ ತರುವ ಹೂ ಬೆಳೆಗಾರರು ಹೂವಿನ ಅಳತೆಯಲ್ಲಿ ರೈತರಿಗೆ ಮೋಸವಾಗುತ್ತಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ದೂರಿಗೆ ಸಂಬಂಧಿಸಿದಂತೆ ಈಚೆಗೆ ಎ.ಪಿ.ಎಂ.ಸಿ. ಕಾರ್ಯದರ್ಶಿ ಬಿ.ಎಲ್.ಕೃಷ್ಣಪ್ಪ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಗುರುಪ್ರಸಾದ್ ಸಮ್ಮುಖದಲ್ಲಿ ಹೂ ಬೆಳೆಗಾರರು ಮತ್ತು ಹೂವಿನ ಸಗಟು ವರ್ತಕರ ಸಭೆ ನಡೆಸಲಾಯಿತು.

ಈ ಹಿಂದೆ ಅನೇಕ ಬಾರಿ ತಿಳಿಸಿದಂತೆ ಹೂವಿನ ಅಳತೆಯಲ್ಲಿ ಯಾವುದೇ ಕಾರಣಕ್ಕೆ ಮೋಸ ಮಾಡದಂತೆ ಕಟ್ಟುನಿಟ್ಟಾಗಿ ಹೂವಿನ ವರ್ತಕರಿಗೆ ತಿಳಿಸಲಾಗಿದ್ದು, ಈ ಸಂಬಂಧ ದೂರುಗಳು ಕಂಡು ಬಂದಲ್ಲಿ ಹೂವಿನ ವರ್ತಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಬಿ.ಎಲ್.ಕೃಷ್ಣಪ್ಪ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿರ್ದೇಶಕ ಎಂ.ಗುರುಪ್ರಸಾದ್, ಹೂ ಬೆಳೆಗಾರರು ಹಾಗೂ ಹೂವಿನ ವರ್ತಕರಾದ ತಿರುಮಲ  ಪ್ಲವರ್ ಸ್ಟಾಲ್ ಮಾಲೀಕರು, ಲಕ್ಷ್ಮೀಪ್ರಿಯ ಪ್ಲವರ್ ಸ್ಟಾಲ್ ಮಾಲೀಕರು, ಆದಿಶಕ್ತಿ ಪ್ಲವರ್ ಸ್ಟಾಲ್ ಮಾಲೀಕರು ಸೇರಿದಂತೆ ಸಗಟು ಹೂವಿನ ವರ್ತಕರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *