ಸುದ್ದಿಒನ್, ಚಿತ್ರದುರ್ಗ, ಜೂನ್. 26 : ವ್ಯವಸಾಯವನ್ನ ಬಲ್ಲವನೇ ಬಲ್ಲ. ಅದರೊಳಗಿನ ಗಂಧ ಗಾಳಿಯನ್ನ ಅರಿತರೆ ಅವನೇ ಕುಬೇರ. ಯಾಕಂದ್ರೆ ಕೃಷಿಯಲ್ಲಿ ಕೇವಲ ಜಮೀನು ಉಳುಮೆ ಮಾಡಿ, ಬೀಜ ಬಿತ್ತನೆ ಮಾಡಿ, ಬೆಳೆಯನ್ನ ತರೋದು ಮಾತ್ರವಲ್ಲ, ಕೃಷಿಯಲ್ಲಿ ಆಸಕ್ತಿಯಿದ್ದವರಿಗೆ ಪ್ರಾಣಿ ಸಾಕಾಣಿಕೆಯೂ ಅನುಕೂಲವಾಗಲಿದೆ. ಅದರಲ್ಲೂ ಕುರಿ, ಮೇಕೆ, ಹಸು ಫಾರ್ಮ್ ಮಾಡಿದವರಿಗೆ ಒಳ್ಳೆಯ ಆದಾಯ ಕೂಡ ಸಿಗಲಿದೆ.
ಹಳ್ಳಿಗಳ ಕಡೆ ಸಂತೆ ಪದ್ಧತಿ ಈಗಲು ಇದೆ. ಈ ಸಂತೆಯಲ್ಲಿ ಮಧ್ಯವರ್ತಿಗಳ ಹಾವಳಿ ಕಡಿಮೆ. ಹೀಗಾಗಿಯೇ ರೈತರು ಸಂತೆಗಳಿಗೆ ತಾವೂ ಸಾಕಿದ ಮೇಕೆ, ಕುರಿಗಳನ್ನ ಹೊಡೆದುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಾರೆ. ಕೊಂಡುಕೊಳ್ಳುವ ಗ್ರಾಹಕರು ಕೂಡ ಅಂತಹ ದಿನಕ್ಕಾಗಿಯೇ ಕಾಯುತ್ತಾರೆ. ಸಂತೆಗೆ ಹೋಗಿ ಕುರಿ, ಮೇಕೆಗಳನ್ನು, ದನ ಕರುಗಳನ್ನು ತರುತ್ತಾರೆ. ಇದೀಗ ಚಿತ್ರದುರ್ಗದ ಸುತ್ತಮುತ್ತಲಿನ ರೈತರಿಗೆ ಕುರಿ, ಮೇಕೆ ಸೇರಿದಂತೆ ಜಾನುವಾರು ಸಂತೆ ವಿಚಾರಕ್ಕೆ ಇಲ್ಲೊಂದು ಮಹತ್ವದ ಸುದ್ದಿ ಇದೆ.
ಇದೇ ತಿಂಗಳ ಕೊನೆಯ ದಿನ ಅಂದರೆ 30-6-2025ರಿಂದ ಕುರಿ ಮತ್ತು ಮೇಕೆ ಮಾರುಕಟ್ಟೆಯನ್ನು ಪ್ರತಿ ಭಾನುವಾರದಂದು ಹಾಗೂ ದನ, ಎಮ್ಮೆ ಇತರೆ ಜಾನುವಾರುಗಳ ಸಂತೆಯನ್ನು ಪ್ರತಿ ಶನಿವಾರದಂದು ನಡೆಸಲು ಉದ್ದೇಶಿಸಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.






