ಚಿತ್ರದುರ್ಗ | ಕಾಲೇಜು ಕಟ್ಟಡದ ಮೇಲಿಂದ ಬಿದ್ದು ಯುವತಿ ಆತ್ಮಹತ್ಯೆ…!

1 Min Read

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಮಕ್ಕಳ ಭವಿಷ್ಯ ಉತ್ತಮವಾಗಲಿ, ಮುಂದೆ ಚೆನ್ನಾಗಿ ಬಾಳಿ ಬದುಕಲಿ ಎಂಬುದೇ ಹೆತ್ತವರ ಹಾರೈಕೆಯಾಗಿರುತ್ತದೆ. ಅದಕ್ಕೆಂದೆ ಕಷ್ಟಪಟ್ಟು ಮಕ್ಕಳನ್ನ ಓದಿಸುತ್ತಾರೆ. ಇನ್ನೇನು ಮಗಳ ಭವಿಷ್ಯ ಉಜ್ವಲವಾಗುತ್ತದೆ. ಮಗಳ ಆನಂದವನ್ನು ನಾವೂ ಕಣ್ಣಾರೆ ಕಾಣಬಹುದು ಎಂದುಕೊಳ್ಳುವಾಗಲೇ ಮಕ್ಕಳು ಬಾರದಲೋಕಕ್ಕೆ ಹೋದರೆ ಆ ತಂದೆ ತಾಯಿಯ ಮನಸ್ಸು ಏನಾಗಬಹುದು..? ನೋವು ಎಷ್ಟಿರಬಹುದು‌. ಇಷ್ಟೆಲ್ಲಾ ಹೇಳೋದಕ್ಕೆ ಕಾರಣ ಓರ್ವ ಕಾಲೇಜು ವಿದ್ಯಾರ್ಥಿನಿ ಕಾಲೇಜು ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರದ ಖಾಸಗಿ ಕಾಲೇಜು ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯುವತಿ ಆತ್ಮಹತ್ಯೆ ಬಳಿಕ ಹಲವು ವಿಚಾರಗಳ ಆರೋಪ ಕೇಳಿ ಬರುತ್ತಿದೆ. ಯುವಕನೊನ್ಬನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಎಂದೇ ಆರೋಪಿಸಲಾಗಿದೆ. ಆತ್ಮಹತ್ಯೆಗೆ ಶರಣಾದ ಯುವತಿಗೆ ಯುವಕನೊಬ್ಬ ಪ್ರೀತಿ‌ ಮಾಡುವಂತೆ ಪೀಡುಸುತ್ತಿದ್ದ ಎಂದು ಪೋಷಕರು ಆರೋಪ ಮಾಡಿದ್ದಾರೆ.

ಪ್ರಥಮ ಬಿಎಸ್ಸಿ ಓದುತ್ತಿದ್ದ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಯುವಕನೊಬ್ಬ ಪ್ರೇಮಾಗೆ ಪ್ರತಿದಿನ ಪ್ರೀತಿ ವಿಚಾರದಲ್ಲಿ ಟಾರ್ಚರ್ ನೀಡುತ್ತಿದ್ದನಂತೆ. ವಾಟ್ಸಪ್ನಲ್ಲಿ ನಿತ್ಯವೂ ಚಾಟಿಂಗ್ ಮಾಡಿ ಕಿರಿಕಿರಿ ಮಾಡುತ್ತಿದ್ದನಂತೆ. ಇದನ್ನು ತಾಳಲಾರದೆ ವಿದ್ಯಾರ್ಥಿನಿ ಇಂದು ಬೆಳಿಗ್ಗೆ ಕಾಲೇಜು ಕಟ್ಟಡದ ಮೇಲಿಂದ ಕೆಳಗೆ ಜಿಗಿದಿದ್ದಾರೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೂ ಚಿಕಿತ್ಸೆ ಫಲಿಸದೆ ಯುವತಿ ಸಾವನ್ನಪ್ಪಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜಿನ ಮುಂದೆ ಎಬಿವಿಪಿ ಕಾರ್ಯಕರ್ತರು ಕೂಡಾ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಪ್ಪ ಅಮ್ಮನ ಕನಸು ಕಮರಿದೆ, ಆ ಕಡೆ ಪ್ರೀತಿಯೂ ಸಿಕ್ಕಿಲ್ಲ. ಈ ಬಲವಂತದ ಪ್ರೀತಿ ಯಾಕೆ ಬೇಕು. ಪ್ರೀತಿ ಹುಟ್ಟಿದರೆ ಅದು ಜೋಪಾನವಾಗಿರಲಿ ಎಂದು ಬಯಸಬೇಕೆ ವಿನಃ ಈ ರೀತಿ ಬಲವಂತ ಮಾಡಿದರೆ ಒಂದು ದಿನ ನಷ್ಟವೇ ಆಗುವುದು. ಈ ರೀತಿ ಉದಾಹರಣೆಗಳು ಸಾಕಷ್ಟಿವೆ. ಸದ್ಯ ಆ ಸಂಬಂಧ ತನಿಖೆ ನಡೆಯುತ್ತಿದೆ. ಸತ್ಯ ಏನಿದೆ ಎಂಬ ವಿಚಾರ ವಿಚಾರಣೆಯ ಬಳಿಕ ತಿಳಿಯಲಿದೆ.

Share This Article
Leave a Comment

Leave a Reply

Your email address will not be published. Required fields are marked *