ಬೆಂಗಳೂರು: ಈ ಹಿಂದೆಯಲ್ಲ ಶಾಲೆಗಳಲ್ಲಿ ದಸರಾ ರಜೆಯನ್ನು ಒಂದು ತಿಂಗಳ ಕಾಲ ನೀಡಲಾಗುತ್ತಿತ್ತು. ಆದರೆ ಈ ಬಾರಿ ಹದಿನೈದು ದಿನಕ್ಕೆ ಮುಗಿಸಲಾಗಿದೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪತ್ರದ ಮೂಲಕ ಹದಿನೈದು ದಿನದ ರಜೆಯನ್ನು ಒಂದು ತಿಂಗಳಿಗೆ ವಿಸ್ತರಿಸುವಂತೆ ತಿಳಿಸಿದ್ದಾರೆ.

ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಈ ಮುಂಚೆ ದಸರಾ ರಜೆ ಒಂದು ತಿಂಗಳ ಕಾಲ ಇತ್ತು. ಬೇಸಿಗೆ ರಜೆ ಎರಡು ತಿಂಗಳುಗಳ ಕಾಲ ಇತ್ತು. ಆದರೆ ಈಗ ಅದು ಹದಿನೈದು ದಿನಕ್ಕೆ ಆಗಿದೆ. ದಸರಾ ಹಾಗೂ ದೀಪಾವಳಿ ಎರಡು ಒಂದೇ ತಿಂಗಳಲ್ಲಿ ಬಂದಿದೆ. ಆ ಎರಡು ಹಬ್ಬ ಮುಗಿಯುವ ತನಕವಾದರೂ ಮಕ್ಕಳಿಗೆ ರಜೆ ಕೊಡಬೇಕಿತ್ತು. ಮಕ್ಕಳಿಗೆ ಶಾಲೆಯ ಪಾಠದ ಜೊತೆಗೆ ಮನೆಯ ವಾತಾವರಣವೂ ತುಂಬಾ ಮುಖ್ಯವಾಗುತ್ತದೆ.

ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಕೇವಲ ಹದಿನೈದು ದಿನದ ರಜೆಯಿಂದ ಮಕ್ಕಳಿಗೆ ತೊಂದರೆಯಾಗುತ್ತದೆ. ಹೀಗಾಗಿ ರಜೆಯನ್ನು ಹದಿನೈದು ದಿನ ಮುಂದೂಡಬೇಕು ಎಂದು ಬಸವರಾಜ್ ಹೊರಟ್ಟಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ದಸರಾ ರಜೆಯಲ್ಲಿರುವ ಮಕ್ಕಳಿಗೆ ಸೋಮವಾರದಿಂದ ಶಾಲೆ ಆರಂಭವಾಗುತ್ತದೆ. ಈ ಮಧ್ಯೆ ಬಸವಾರಜ್ ಹೊರಟ್ಟಿ ಅವರ ಪತ್ರದಂತೆ ರಜೆ ಮುಂದೂಡಿಕೆಯಾದರೆ ದೀಪಾವಳಿಯ ತನಕ ರಜೆ ಸಿಗಲಿದೆ.

