ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 11 : ಒಳ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಕಳೆದ 5 ರಂದು ಪ್ರೊ.ಬಿ.ಕೃಷ್ಣಪ್ಪ ಸಮಾಧಿಯಿಂದ ಹೊರಟ ಒಳ ಮೀಸಲಾತಿ ಹೋರಾಟ ಸಮಿತಿ ಪಾದಯಾತ್ರೆ ಸೋಮವಾರ ಚಿತ್ರದುರ್ಗದ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿತು.
ಸುಪ್ರೀಂಕೋರ್ಟ್ ತೀರ್ಪಿನಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಷ್ಟೊತ್ತಿಗಾಗಲೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕಿತ್ತು. ವಿನಾ ಕಾರಣ ಕಾಲಹರಣ ಮಾಡುತ್ತ ದಲಿತರನ್ನು ಯಾಮಾರಿಸುತ್ತಿದ್ದಾರೆ. ಒಳ ಮೀಸಲಾತಿ ಜಾರಿಯಾಗುವತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ಇದೇ ತಿಂಗಳ 22 ರಂದು ನಮ್ಮ ಯಾತ್ರೆ ಬೆಂಗಳೂರು ತಲುಪಲಿದ್ದು, ಒಳ ಮೀಸಲಾತಿ ಅನುಷ್ಠಾನಕ್ಕೆ ತರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಅಂತಿಮ ಗಡುವು ನೀಡುತ್ತೇವೆಂದು ಬಿ.ಕೆ.ಭಾಸ್ಕರ್ಪ್ರಸಾದ್ ಎಚ್ಚರಿಸಿದರು.
ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ ದಲಿತ ಸಚಿವ, ಶಾಸಕರುಗಳ ಅಣಕು ಗೊಂಬೆಗಳನ್ನು ತಯಾರಿಸಿ ರಕ್ತದ ಮೂಲಕ ಅಭಿಷೇಕ ಮಾಡಿ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಗುವುದು. ಅಧಿಕಾರಕ್ಕಾಗಿ ಅಂಟಿಕೊಂಡಿರುವ ದಲಿತ ಸಚಿವ ಶಾಸಕರುಗಳು ಒಳ ಮೀಸಲಾತಿ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಹಾಗಾಗಿ ನಮ್ಮ ಹೋರಾಟ ಉಗ್ರವಾಗಿರುತ್ತದೆಂದು ಹೇಳಿದರು.
ಪಾದಯಾತ್ರೆ ಹೊರಟವರಲ್ಲಿ ಕೆಲವರು ರಕ್ತದಾನದ ಮೂಲಕ ಸರ್ಕಾರದ ಗಮನ ಸೆಳೆದರು. ಕುಂಚಿನಗಹಾಳ್ ಮಹಲಿಂಗಪ್ಪ, ಶಿವಣ್ಣ, ದಲಿತ ಮುಖಂಡ ಬಿ.ರಾಜಪ್ಪ, ಲೇಖಕ ಹೆಚ್.ಆನಂದ್ಕುಮಾರ್, ಶಿವರಾಜ್, ಪ್ರಭುರಾಜ್ ಕೊಡ್ಲಿ, ಬಿ.ಆರ್.ಸುರೇಶ್ ಇನ್ನು ಅನೇಕರು ಪಾದಯಾತ್ರೆಯಲ್ಲಿದ್ದರು.




