ವರದಿ ಮತ್ತು ಫೋಟೋ ಕೃಪೆ
ವೇದಮೂರ್ತಿ. ಎಂ.
ಭೀಮಸಮುದ್ರ, ಚಿತ್ರದುರ್ಗ (ತಾ)
ಮೊ : 8088076203
ಸುದ್ದಿಒನ್, ಚಿತ್ರದುರ್ಗ, ಜನವರಿ. 22 : ಸಿದ್ದರಾಮಯ್ಯನವರು ಒಂದು ಬಾರಿ ಬಳ್ಳಾರಿಗೆ ಪಾದಯಾತ್ರೆ ಹೋರಾಟ ಮಾಡಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಈಗ ಗಣಿ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೋರಾಟಗಾರ ಚಿತ್ರನಟ ಚೇತನ್ ಹೇಳಿದರು.
ಅವರು ತಾಲ್ಲೂಕಿನ ಭೀಮಸಮುದ್ರ ಗ್ರಾಮದ ತರಳುಬಾಳು ಕಲ್ಯಾಣ ಮಂಟಪದಲ್ಲಿ ರೈತ ಸಂಘಟನೆ, ಗಣಿಭಾದಿತ ಹೋರಾಟ ಸಮಿತಿ ಪರಿಸರ ಮತ್ತು ವನ್ಯಜೀವಿ ಸುರಕ್ಷಣಾ ಹೋರಾಟ ಸಮಿತಿ, ಮಹಿಳಾ ಹಕ್ಕು ಹೋರಾಟ ಸಮಿತಿ ವತಿಯಿಂದ ಜಾಗೃತಿ ಜಾಥಾ ಹಾಗೂ ಜಾಗೃತಿ ಕಾರ್ಯಗಾರ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ
ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಯಾವತ್ತಾದರೂ ಬದಲಾವಣೆ ಆಗಿದೆ ಎಂದರೆ ದಯೆ ದಾಕ್ಷಿಣ್ಯ, ತಳಮಟ್ಟದ ಹೋರಾಟದಿಂದ ಮಾತ್ರ. ಗ್ರಾಮದಲ್ಲಿ ಲಾರಿಗಳು ಓಡಾಡುವುದನ್ನು ನಿಲ್ಲಿಸಬೇಕೆಂದು
ರೈತ ಸಂಘಟನೆಯವರು ಮಾಡುತ್ತಿರುವುದು ಒಳ್ಳೆಯ ಕೆಲಸ. ಹೋರಾಟದಿಂದ ಪರಿಹಾರ ಹಾಗೂ ಪರಿವರ್ತನೆ ಆಗುತ್ತದೆ. ಚಿತ್ರದುರ್ಗ ಹಾಗೂ ಹೊಳಲ್ಕೆರೆ , ಬಳ್ಳಾರಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಮನುಷ್ಯನ ಆರೋಗ್ಯ ಪರಿಸರ ಮೇಲೆ ಬಹಳಷ್ಟು ಪರಿಣಾಮ ಬೀಳುತ್ತಿದೆ ಎಂದರು.
ಗಣಿಗಾರಿಕೆ ಕಂಪನಿಗೆ ಸಿಗುವ ಲೈಸೆನ್ಸ್ ಗಳನ್ನು ಇನ್ನೂ ಸುಲಭವಾಗಿ ಸಿಂಗಲ್ ವಿಂಡೋ ಅಂತ ಮಾಡಿ ಅವರಿಗೆ ಎಲ್ಲವೂ ಒಂದೇ ಕಡೆ ಸಿಗುವ ಹಾಗೆ ಮಾಡಿದ್ದಾರೆ.
2010 ರಲ್ಲಿ ಈಗಿರುವ ಮುಖ್ಯಮಂತ್ರಿಗಳು ರಿಪಬ್ಲಿಕ್ ಬಳ್ಳಾರಿ ಎಂದು ಪಾದಯಾತ್ರೆ ಮಾಡಿದ್ದರು. ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದರು. ಆದರೆ ಈಗ ನೋಡಿದರೆ ಮೈನಿಂಗ್ ಮಾಫಿಯಾಗಳು ಜೊತೆ ಕೈಜೋಡಿಸಿದ್ದಾರೆ ಎಂಬ ಅನುಮಾನ ಬರುತ್ತದೆ ಎಂದರು. ಆದರೆ ಸರ್ಕಾರ ಹಾಗೂ ಅಧಿಕಾರಿಗಳು ಪರಿಸರವನ್ನು ಉಳಿಸುವ ಕಾರ್ಯ ಮಾಡಲಿ. ಭೀಮಸಮುದ್ರದಲ್ಲಿ ಲಾರಿಗಳು ಗ್ರಾಮದ ಒಳಗಡೆ ಓಡಾಡುವುದರಿಂದ ಬಹಳಷ್ಟು ಆರೋಗ್ಯ ಸಮಸ್ಯೆ ಕಂಡು ಬಂದಿದೆ ಎಂದು ತಿಳಿದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದಾಗಿ ಹೋರಾಟ ಮಾಡಲು ನಮ್ಮ ಬೆಂಬಲ ಇದೆ ಎಂದು ಹೇಳಿದರು.

ಇತಿಹಾಸ ಶೋಧಕರಾದ ರಾಧಾಕೃಷ್ಣ ಪಲ್ಲಕ್ಕಿ ಮಾತನಾಡಿ
ಗಣಿ ಕಂಪನಿಗಳಿಂದ ಶಬ್ದ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಆಗುತ್ತಿದೆ. ಪ್ರಾಣಿ ಪಕ್ಷಿಗಳು ಜಾಗ ಹುಡುಕುವ ಪರಿಸ್ಥಿತಿ ಬಂದಿದೆ. ಇತ್ತೀಚಿಗೆ ಹಿಂದೂ ಸಂಪ್ರದಾಯದ ಪ್ರಕಾರ ಪಿಂಡ ಇಡುವ ಪದ್ಧತಿ ಇದೆ. ಆದರೆ ಅದನ್ನು ತಿನ್ನುವುದಕ್ಕೆ ಕಾಗೆಗಳಿಲ್ಲ ಚಿಕ್ಕ ಚಿಕ್ಕ ಪಕ್ಷಿಗಳು ಕೂಡ ಕಾಣೆಯಾಗಿವೆ. ಮನುಷ್ಯ ಸಂಘ ಜೀವಿ. ಅವನು ಎಲ್ಲೂ ಕೂಡ ಹೋಗಲಾರ. ಒಂದೆಡೆ ನೆಲೆಸಿದರೆ ಅವನಿಗೆ ಬೇಕಾದ ಮನೆ ಕಟ್ಟಿಕೊಂಡು ವಾಸ ಮಾಡುತ್ತಾನೆ. ಆದರೆ ಇಲ್ಲಿ ನೋಡಿದರೆ ಲಾರಿ ಧೂಳಿನಿಂದ ಬೇರೆ ಕಡೆ ಹೋಗುವ ಪರಿಸ್ಥಿತಿ ಬಂದಿದೆ. ಗ್ರಾಮದಲ್ಲಿ ರೈತರು ಮಹಿಳೆಯರು ಹಾಗೂ ಯುವಕರು ಈ ಸಭೆಗೆ ಬಂದಿರುವುದು ಬಹಳ ಸಂತೋಷಕರ ವಿಚಾರ. ಪರಿಸರವನ್ನು ಉಳಿಸಬೇಕಾದರೆ ಇಂತಹ ಸಭೆಗಳು ನಡೆಯಬೇಕು ಎಂದು ತಿಳಿಸಿದರು.
ಚಿತ್ರದುರ್ಗ ಅಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಬಿ.ಇ. ಜಗದೀಶ್ ಮಾತನಾಡಿ, ಗ್ರಾಮದಲ್ಲಿ ಲಾರಿಗಳು ಓಡಾಡುವುದರಿಂದ ಬಹಳಷ್ಟು ಆರೋಗ್ಯದ ಸಮಸ್ಯೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ಓಡಾಡಲು ಪರವಾನಿಗೆ ನೀಡಿದ್ದಾರೆ ಎಂದು ಲಾರಿಗಳು ಬಂದು ನಿಂತಿವೆ. ಆದರೆ ಇಲ್ಲಿರುವ ಪರಿಸ್ಥಿತಿ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ದಯಮಾಡಿ ಲಾರಿಗಳನ್ನು ಗ್ರಾಮದ ಒಳಗಡೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಹಾಗೇನಾದರೂ ಲಾರಿಗಳು ಗ್ರಾಮದಲ್ಲಿ ಓಡಾಡಿದರೆ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಧನಂಜಯ್ ಹಂಪಯ್ಯನಮಾಳಿಗೆ, ಗೌರವಾಧ್ಯಕ್ಷರಾದ ತಿಪ್ಪೇಸ್ವಾಮಿ ಮಲ್ಲಾಪುರ, ಸಂಘಟನಾ ಕಾರ್ಯದರ್ಶಿಗಳಾದ ಚಿಕ್ಕಪ್ಪನಳ್ಳಿ ರುದ್ರಸ್ವಾಮಿ, ಸರ್ವೋದಯ ಪಕ್ಷದ ಅಧ್ಯಕ್ಷರಾದ ಜೆ. ಯಾದವ್ ರೆಡ್ಡಿ, ಕರ್ನಾಟಕ ಗಣಿಬಾದಿತ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಬಿ.ದುರ್ಗ ರಮೇಶ್, ಭೀಮಸಮುದ್ರ ಗ್ರಾಮದ ರೈತ ಸಂಘಟನೆಯ ಅಧ್ಯಕ್ಷರಾದ ಶಂಕರಮೂರ್ತಿ, ಉಪಾಧ್ಯಕ್ಷರಾದ ಪೂರಿಯ ನಾಯಕ್, ಸದಸ್ಯರುಗಳಾದ ಕುಮಾರ್, ಶಿವಕುಮಾರ್, ಮಹೇಶ್ವರಪ್ಪ, ನಿರಂಜನ್, ನಾಗರಾಜ್ ನಾಯಕ ಹಾಗೂ ಗ್ರಾಮಸ್ಥರು ಮಹಿಳೆಯರು ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.






