ಚಳ್ಳಕೆರೆ ಯುವಕನ ವಿಡಿಯೋ ವೈರಲ್ : ನ್ಯಾಯ ಸಿಗದಿದ್ದರೆ Metro, DRDO ಬ್ಲಾಸ್ಟ್ ಮಾಡುತ್ತೇನೆ : ಬಂಧಿಸಿದರೆ ದರ್ಶನ್ ಪಕ್ಕದ ಸೆಲ್ ಗೆ ಹಾಕಿ

1 Min Read

ಸುದ್ದಿಒನ್, ಚಳ್ಳಕೆರೆ, ಜುಲೈ.28: ನ್ಯಾಯ ಸಿಗದಿದ್ದರೆ ಮೆಟ್ರೋ, DRDO, IISC ಬ್ಲಾಸ್ಟ್ ಮಾಡ್ತೀನೆಂದು ಯುವಕನೋರ್ವ ವಿಡಿಯೋ ಮಾಡಿ ಹರಿಬಿಟ್ಟ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.

ಗಾಂಧಿನಗರದ ಪೃಥ್ವಿರಾಜ್ ಎಂಬ ಯುವಕ ಈ ವಿಡಿಯೋ ಮಾಡಿದ್ದಾನೆ. ಒಂದು ವೇಳೆ ಪೊಲೀಸರು ನನ್ನನ್ನು ಬಂಧಿಸಿದರೆ ಕೊಲೆ ಆರೋಪದ ಮೇಲೆ ಬಂಧಿಯಾಗಿರುವ ನಟ ದರ್ಶನ್ ಅವರ ಪಕ್ಕದ ಸೆಲ್ ಗೆ ಹಾಕಬೇಕೆಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ.

ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ  ಪೃಥ್ವಿರಾಜ್ ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದಾನೆ. ಈ ಕುರಿತು ಅವರ ತಾಯಿ  ಚಳ್ಳಕೆರೆ ಠಾಣೆಗೆ ಹೋಗಿ ನನ್ನ ಪುತ್ರ ಪೃಥ್ವಿರಾಜ್ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸದೆ ವಾಪಸ್ ಕಳಿಸಿದ್ದರು.

ಇದಾದ ಕೆಲವು ದಿನಗಳ ನಂತರ ಮಗ‌ ಮನೆಗೆ ವಾಪಾಸು ಬಂದಿದ್ದಾನೆ. ತಾಯಿ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರವನ್ನು ಮಗನಿಗೆ ಹೇಳಿದ್ದಾರೆ. ಪೃಥ್ವಿರಾಜ್, ಚಳ್ಳಕೆರೆ ಠಾಣೆ ಬಳಿಗೆ ಹೋಗಿ ವಿಡಿಯೋ ಮಾಡುತ್ತಲೇ ದೂರು ಯಾಕೆ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿದ್ದಾನೆ. ಪೊಲೀಸರು ಮೊಬೈಲ್ ಆಫ್ ಮಾಡು ಎಂದರೂ ಅವರ ಮಾತು ಕೇಳದೇ ವಿಡಿಯೋ ಮಾಡಿದ್ದಾನೆ. ಆಗ ಪೊಲೀಸರು ಮೊಬೈಲ್ ಕಸಿದುಕೊಂಡು ಬುದ್ದಿ ಹೇಳಿ ಕಳಿಸಿದ್ದರು.

ಇಷ್ಟಕ್ಕೆ ನಿಲ್ಲದೆ ಪೃಥ್ವಿರಾಜ್, ಪೊಲೀಸ್ ಠಾಣೆಯಿಂದ ಮತ್ತೊಂದು ವಿಡಿಯೋ ಮಾಡಿದ್ದಾನೆ. ನಾನು ಪೊಲೀಸರಿಗೆ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರು ನನಗೆ ಹೊಡೆದಿದ್ದಾರೆ. ನನ್ನ ತಾಯಿಯ ಎದುರೇ ಠಾಣೆಯೊಳಗೆ ಹಿಡಿದೊಯ್ದು ಹಲ್ಲೆ ಮಾಡಿದ್ದಾರೆ. ನಾನು ಎಸ್ಪಿ, ಡಿಸಿ ಬಳಿಗೆ ಹೋಗಿ ನ್ಯಾಯ ಕೇಳುತ್ತೇನೆ. ನ್ಯಾಯ ಸಿಗದಿದ್ದರೆ ಏನು ಮಾಡಬೇಕೆಂದು ಗೊತ್ತಿದೆ. ಡಿಪ್ಲೊಮಾ ಅನ್ ಕಂಪ್ಲೀಟ್ ಆಗಿದ್ದರೂ ಎಲೆಕ್ಟ್ರಿಕಲ್ ಕೆಲಸ ಗೊತ್ತು. ಬೆಂಗಳೂರಿನ ಮುಖ್ಯ ಕೆಂದ್ರಗಳಿಗೆ ಎಲ್ಲಿಂದ ವಿದ್ಯುತ್ ಕನೆಕ್ಷನ್ ಇದೆ ಗೊತ್ತು. ರಾಜಭವನ, ವಿಧಾನಸೌಧ, ಮೆಟ್ರೋ, ಇಸ್ರೋ, ಡಿಆರ್​ಡಿಓ ಎಲ್ಲಾ ಗೊತ್ತು. ಎಲ್ಲಿ ಏನು ಮಾಡಿದರೆ ಬ್ಲಾಸ್ಟ್ ಆಗುತ್ತದೆಂದು ಗೊತ್ತು. ನ್ಯಾಯ ಸಿಗದಿದ್ದರೆ ನಾನು ಟೆರರಿಸ್ಟ್ ಆಗುತ್ತೇನೆಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೃಥ್ವಿರಾಜ್ ಹರಿಬಿಟ್ಟಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *