ವರದಿ ಮತ್ತು ಫೋಟೋ ಕೃಪೆ

ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 24 : ಮೆದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫ್ಲೋರೈಡ್ ಅಂಶ ಜಾಸ್ತಿಯಿದೆ ಎನ್ನುವುದನ್ನು ನನ್ನ ಗಮನಕ್ಕೆ ತಂದಿದ್ದೀರ. ಶೀಘ್ರವೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದೆಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಭರವಸೆ ನೀಡಿದರು.
ಮೆದೆಹಳ್ಳಿ ರಸ್ತೆಯಲ್ಲಿರುವ ಆದಿಶೇಷ ರೋಟರಿ ಭವನದಲ್ಲಿ ಚೈತನ್ಯ ಕ್ಷೇಮಾಭಿವೃದ್ದಿ ಸಂಘದಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನೀವುಗಳು ಮಾಡಿರುವ ಸನ್ಮಾನ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮೆದಹಳ್ಳಿಯಲ್ಲಿ ಸಿ.ಸಿ.ರಸ್ತೆಗೆ ಎರಡು ಕೋಟಿ ರೂ.ಗಳನ್ನು ನೀಡಿದ್ದೇನೆ. ಮತ್ತೊಂದು ಕೋಟಿ ರೂ.ಗಳನ್ನು ಕೊಡುತ್ತೇನೆ. ಯು.ಜಿ.ಡಿ.ಸಮಸ್ಯೆ ಕೇವಲ ಮೆದೆಹಳ್ಳಿಯಲ್ಲಷ್ಟೆ ಇಲ್ಲ. ಇಡಿ ಚಿತ್ರದುರ್ಗದಲ್ಲಿ ಯು.ಜಿ.ಡಿ.ಸಮಸ್ಯೆಯಿದೆ. ಕಾಮಗಾರಿ ಕಳಪೆಯಾಗಿರುವುದರಿಂದ ರಿಪೇರಿ ಮಾಡಿಸಬಹುದೆಂದು ಹೇಳಿದರು.
ನಿಗಮ ಮಂಡಳಿಗಳ ನೇಮಕದಲ್ಲಿ ಮೆದಹಳ್ಳಿಯವರಿಗೆ ಆದ್ಯತೆ ನೀಡಿದ್ದೇನೆ. ದೇವಸ್ಥಾನಕ್ಕೆ ಐದು ಲಕ್ಷ ರೂ.ಗಳನ್ನು ಕೊಟ್ಟಿದ್ದೇನೆ. ಎರಡು ಅಂಗನವಾಡಿಗಳನ್ನು ಕಟ್ಟಿಸಲಾಗಿದೆ. ಮೂರುವರೆ ಕೋಟಿ ರೂ.ಗಳಿಗಿಂತ ಹೆಚ್ಚು ಹಣ ಮೆದೆಹಳ್ಳಿ ಗ್ರಾಮ ಪಂಚಾಯಿತಿಗೆ ಮಂಜೂರು ಮಾಡಿಸಿದ್ದೇನೆಂದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪಂಚಾಯಿತಿಗಳಲ್ಲಿ ಉಚಿತ ನೇತ್ರ ತಪಾಸಣೆಯನ್ನು ನಡೆಸುವುದಾಗಿ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ತಿಳಿಸಿದರು.
ಮೆದೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವ್ಯ ವಿಜಯಕುಮಾರ್ ಮಾತನಾಡಿ ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರ ಸಹಕಾರದಿಂದ ಮೆದೆಹಳ್ಳಿಯಲ್ಲಿ ಅನೇಕ ಅಭಿವೃದ್ದಿ ಕೆಲಸಗಳಾಗಿದೆ. ಅಧ್ಯಕ್ಷೆಯಾಗಿ ನಾನು ಅವಿರೋಧವಾಗಿ ಆಯ್ಕೆಯಾಗಲು ಶಾಸಕರು ಕಾರಣ ಎಂದು ಸ್ಮರಿಸಿದರು. ಮೆದೆಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ್, ಗುರಪ್ಪ ಇವರುಗಳು ವೇದಿಕೆಯಲ್ಲಿದ್ದರು.
ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಮೆದೆಹಳ್ಳಿ ಗ್ರಾಮದ ಮುಖಂಡರುಗಳು ಸನ್ಮಾನ ಸಮಾರಂಭದಲ್ಲಿ ಹಾಜರಿದ್ದರು.

