ಚಿತ್ರದುರ್ಗದ ಪಾಳುಬಿದ್ದ ಮನೆಯಲ್ಲಿ ಅಸ್ಥಿಪಂಜರ ಪತ್ತೆ ಪ್ರಕರಣ : 5 ಕೈಗುರುತು, ಇಬ್ಬರ ಕಾಲಲ್ಲಿ ಹಗ್ಗ , ಮತ್ತಷ್ಟು ಕುತೂಹಲ ಮೂಡಿಸುತ್ತಿರುವ ಕುರುಹುಗಳು…!

1 Min Read

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.31 : ಚಳ್ಳಕೆರೆ ಗೇಟ್ ಬಳಿಯ ಪಾಳು ಬಿದ್ದ ಮನೆಯಲ್ಲಿ ಐದು ಅಸ್ಥಿ ಪಂಜರ ಸಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಸ್ಥಿಪಂಜರ ಸಿಕ್ಕ ಮನೆಯಲ್ಲಿ ಇಂದು ಐದು ಕೈಗುರುತು ಕೂಡ ಪತ್ತೆಯಾಗಿದೆ.

ಮನೆಯೊಳಗೆ ಸಿಗುತ್ತಿರುವ ಸಾಕ್ಷಿಗಳು ಇದು ಕೊಲೆಯೋ..? ಆತ್ಮಹತ್ಯೆಯೋ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಈ ಪಾಳು ಬಿದ್ದ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ, ಪತ್ನಿ‌ ಪ್ರೇಮಾ ರೆಡ್ಡಿ, ತ್ರಿವೇಣಿ ರೆಡ್ಡಿ, ಕೃಷ್ಣಾ ರೆಡ್ಡಿ ಹಾಗೂ ನರೇಂದ್ರ ರೆಡ್ಡಿ ವಾಸವಾಗಿದ್ದರು ಎನ್ನಲಾಗುತ್ತಿದೆ. ಈ ಐವರದ್ದೇ ಅಸ್ಥಿಪಂಜರ ಎಂಬ ಅನುಮಾನದ ಜೊತೆಗೆ ಈಗ ಐದು ಕೈಗಳ ಗುರುತು ಕೂಡ ಸಿಕ್ಕಿದೆ.

ಈ ಮೂಲಕ ಪೊಲೀಸರ ತನಿಖೆ ಚುರುಕುಗೊಂಡಿದೆ. ಹಾಲ್ ನಲ್ಲಿ ಇರುವ ಗೋಡೆಗಳ ಮೇಲೆ ಐದು ಕೈಗಳ ಗುರುತು ಪತ್ತೆಯಾಗಿದೆ. ಇದರ ಜೊತೆಗೆ ಎರಡು ಶವಗಳ ಕಾಲಲ್ಲಿ ಹಗ್ಗ ಪತ್ತೆಯಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಯನ್ನು ಕಳುಹಿಸಲಾಗಿದೆ. ವರದಿ ಬಂದ ಮೇಲೆ ಇನ್ನಷ್ಟು ವಿಚಾರಗಳು ಹೊರ ಬರಲಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಈಗ ಆ ಐದು ಕೈ ಗುರುತು ಯಾರದ್ದು‌ ಎಂಬ ಪ್ರಶ್ನೆಗಳು ಮೂಡಿವೆ. ಮೊದಲೇ ಐದು ಶವಗಳು ಸಿಕ್ಕಿವೆ. ಈಗ ಐದು ಕೈಗುರುತುಗಳು ಸಿಕ್ಕಿರುವುದು ಆಶ್ಚರ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *