ಸುದ್ದಿಒನ್, ಹಿರಿಯೂರು, ಜನವರಿ. 05 : ತಾಲೂಕಿನಲ್ಲಿ 66 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಪ್ರತಿದಿನ 65 ಸಾವಿರ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದೆ ಎಂದು ಶಿಮುಲ್ ನಿರ್ದೇಶಕ ಬಿಸಿ ಸಂಜೀವಮೂರ್ತಿ ಹೇಳಿದರು.
ನಗರದ ಅನ್ನಪೂರ್ಣೇಶ್ವರಿ ಖಾಸಗಿ ಹೋಟೆಲಿನಲ್ಲಿ ಸೋಮವಾರ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ಶಿಮುಲ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು 15 ವರ್ಷ ಸೇವೆ ಸಲ್ಲಿಸಿದವರಿಗೆ ಮಾತ್ರ ನಿವೃತ್ತಿ ವೇತನ ನೀಡಲಾಗುತ್ತಿದೆ. ಕಾರ್ಯದರ್ಶಿಗಳ ಬೇಡಿಕೆಯಂತೆ 10 ರಿಂದ 15 ವರ್ಷದೊಳಗೆ ನಿವೃತ್ತಿ ಹೊಂದಿದುವವರಿಗೂ ಸಹ ನಿವೃತ್ತಿ ವೇತನ ಶ್ರೇಣಿ ನೀಡುವಂತೆ ಆಡಳಿತ ಮಂಡಳಿಯಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ತಾಲೂಕಿಗೆ ಎರಡ್ಮೂರು ಬಿಎಂಸಿ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದೆ. ರಬ್ಬರ್ ಮ್ಯಾಟ್ ಸಮಸ್ಯೆ ಕೇಳಿ ಬಂದಿದ್ದು, ಇದೀಗ 50 ಸಾವಿರ ರಬ್ಬರ್ ಮ್ಯಾಟ್ ಟೆಂಡರ್ ಕರೆಯಲಾಗಿದೆ. ಮ್ಯಾಟ್ ಕೊಳ್ಳಲು ರೈತರು ಮುಂದಾಗಬೇಕು. ನಗರದ ಎಪಿಎಂಸಿ ಆವರಣದಲ್ಲಿ ನಿವೇಶನವಿದ್ದು ಪ್ರಸಕ್ತ ಸಾಲಿನಲ್ಲಿ ಕಛೇರಿ ನಿರ್ಮಾಣ ಮಾಡಿ, ಅದೇ ಕಛೇರಿಯಲ್ಲಿ ಮುಂದಿನ 2027ರ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು. ಹಾಲಿನ ಉತ್ಪಾದನೆ ಹೆಚ್ಚಳಕ್ಕೆ ಐದಾರು ಸೊಸೈಟಿಗಳು ಪುನಶ್ಚೇತನಗೊಳ್ಳಬೇಕಿದೆ. ಹೈನುಗಾರಿಕೆಯಲ್ಲಿ ಬದಲಾವಣೆಯದಾಗ ಕುಟುಂಬಗಳು ಆರ್ಥಿಕವಾಗಿ ಸಬಲರಾಗುತ್ತವೆ ಎಂದು ತಿಳಿಸಿದರು.
ಹೊಳಲ್ಕೆರೆ ವಿಭಾಗದ ವಿಮುಲ್ ನಿರ್ದೇಶಕ ಜಿಬಿ. ಶೇಖರಪ್ಪ ಮಾತನಾಡಿ ಹೈನುಗಾರಿಕೆ ಕೇವಲ ಉಪಕಸುಬು ಅಲ್ಲ. ಅದೊಂದು ಪ್ರಮುಖ ಜೀವನಾಧಾರ. ಸಣ್ಣ ಮತ್ತು ಅತಿ ಸಣ್ಣ ರೈತರು ಹೈನುಗಾರಿಕೆಯಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಆದಾಯ ಪಡೆಯಲು ಸಹಕಾರ ಸಂಘಗಳು ವೇದಿಕೆಯಾಗಿವೆ. ತಾಲ್ಲೂಕಿನಲ್ಲಿ 66 ಹಾಲಿನ ಡೈರಿಗಳಿಂದ, ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದಕರ ಸಮಸ್ಯೆಗಳು ಕಂಡು ಬಂದಲ್ಲಿ ಅವುಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು. ಗುಣಮಟ್ಟದ ಮ್ಯಾಟ್ ವಿತರಣೆಗೆ ಕ್ರಮ ವಹಿಸಲಾಗಿದೆ. ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಿಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಜಿಪಿ. ರೇವಣಸಿದ್ದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರ ಸಂಘಗಳು ಉಳಿದರೆ ಗ್ರಾಮೀಣ ಪ್ರದೇಶದ ಆರ್ಥಿಕ ಪ್ರಗತಿ ಸಾಧ್ಯ. ನಾವು ಚುನಾವಣೆ ಸಂದರ್ಭದಲ್ಲಿ ನುಡಿದಂತೆ ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ. ಹಾಲು ಉತ್ಪಾದಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಬಗೆಹರಿಸಲಾಗುವುದು.
ತಾಲ್ಲೂಕಿನ ರೈತರು ಕೃಷಿಯೊಂದಿಗೆ ದೊಡ್ಡ ಮಟ್ಟದಲ್ಲಿ ಹೈನುಗಾರಿಕೆ, ಪಶುಪಾಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಆರ್ಥಿಕವಾಗಿ ಸದೃಢರಾಗಲು ನೆರವಾಗಿದೆ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಹಿರಿಯೂರು ತಾಲ್ಲೂಕಿಗೆ ಮ್ಯಾಟ್ ಬಂದಿಲ್ಲ. ಜೋಳದ ಬೀಜ ವಿತರಣೆಯಲ್ಲಿ ತಾರತಮ್ಯವಾಗಿದ್ದು, ಸರಿಪಡಿಸಬೇಕು. ಕಾರ್ಯದರ್ಶಿಗಳ ನಿವೃತ್ತಿ ಅವಧಿ ಕಡಿಮೆ ಇದ್ದರೂ ನಿವೃತ್ತಿ ವೇತನ ನೀಡಬೇಕು ಎಂದು ಸಂಘದ ಅಧ್ಯಕ್ಷ ನಾಗರಾಜ್ ಮನವಿ ಮಾಡಿದರು.
ಜಿಪಿ. ರೇವಣಸಿದ್ದಪ್ಪ ಪ್ರತಿಕ್ರಿಯಿಸಿ ಮ್ಯಾಟ್ ಬಂದಿದ್ದು, ನಾಲ್ಕೈದು ದಿನಗಳಲ್ಲಿ ಮ್ಯಾಟ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಜೋಳದ ಬೀಜ ಕಡಿಮೆ ಬಂದಿದ್ದರಿಂದ ವ್ಯತ್ಯಾಸವಾಗಿದೆ. ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು. ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 15 ವರ್ಷ ಪೂರೈಸಿದ ಕಾರ್ಯದರ್ಶಿಗಳಿಗೆ ನಿವೃತ್ತಿ ವೇತನ ನೀಡಲಾಗುತ್ತಿದೆ ಎಂದರು.
ನಿವೃತ್ತ ಅಧಿಕಾರಿ ಕೆ. ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಚಳ್ಳಕೆರೆ ಉಪವಿಭಾಗಾಧಿಕಾರಿ ಪುಟ್ಟರಾಜು, ಮಾರ್ಗ ವಿಸ್ತರಣಾಧಿಕಾರಿ ಕೃಷ್ಣಕುಮಾರ್, ಪಶುವೈದ್ಯ ನರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಗುಣಶೇಖರ್, ಮಲ್ಲೇಶಪ್ಪ, ಬಿ.ನಿರಂಜನ್ ಮೂರ್ತಿ, ಜೆಜಿ ಹಳ್ಳಿ ಗೋವಿಂದರಾಜು, ಸುರೇಶ್ ಬಾಬು, ಸೇರಿದಂತೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಇದ್ದರು. ಹೊಸದುರ್ಗ ವಿಸ್ತರಣಾಧಿಕಾರಿ ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು.


