ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 07 : ನಗರಸಭೆ ಮಾಜಿ ಗೊಲ್ಲ ಸಮಾಜದ ಮುಖಂಡ ಸಿ.ಟಿ.ಕೃಷ್ಣಮೂರ್ತಿಗೆ ಜಾನಪದ ಜಾಗೃತಿ ಪರಿಷತ್ ವತಿಯಿಂದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕಾಯಕ ಯೋಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಹೆಚ್.ಪ್ಯಾರೆಜಾನ್ ಶಾಲು, ಹಾರ, ಮೈಸೂರು ಪೇಟ ತೊಡಿಸಿ ನೆನಪಿನ ಕಾಣಿಕೆ ನೀಡಿ ಸಿ.ಟಿ.ಕೃಷ್ಣಮೂರ್ತಿಯವರನ್ನು ಗೌರವಿಸಿದರು.
ತಾಲ್ಲೂಕು ಕಚೇರಿಯ ಕಂದಾಯ ನಿರೀಕ್ಷಕ ಪ್ರಾಣೇಶ್ ಮಾತನಾಡಿ ಜಾನಪದ ಜಾಗೃತಿ ಪರಿಷತ್ನವರು ನಿಜವಾದ ಸಮಾಜ ಸೇವಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ಅತ್ಯಂತ ಅರ್ಥಪೂರ್ಣ. ಕೊಳಗೇರಿ ಮಕ್ಕಳಿಗೆ ನೋಟ್ಬುಕ್ಗಳ ವಿತರಣೆ, ವಿಧವೆಯರು ಹಾಗೂ ಹಿರಿಯ ನಾಗರೀಕರಿಗೆ ಸರ್ಕಾರದಿಂದ ಪಿಂಚಣಿ ಕೊಡಿಸುವ ಕೆಲಸವನ್ನು ಹೆಚ್.ಪ್ಯಾರೆಜಾನ್ ಹಿಂದಿನಿಂದಲೂ ನಿಸ್ವಾರ್ಥವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಗೊಲ್ಲ ಸಮಾಜದ ಸಿ.ಟಿ.ಕೃಷ್ಣಮೂರ್ತಿರವರ ಸಮಾಜ ಸೇವೆಯನ್ನು ಪರಿಗಣಿಸಿ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ ಎಂದು ಗುಣಗಾನ ಮಾಡಿದರು.
ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಬಿ.ಎಲ್.ಮಲ್ಲಿಕಾರ್ಜುನ್ ಮಾತನಾಡುತ್ತ ಸಿ.ಟಿ.ಕೃಷ್ಣಮೂರ್ತಿ ಕೇವಲ ಗೊಲ್ಲ ಸಮಾಜದ ಮುಖಂಡರಲ್ಲ. ಎಲ್ಲಾ ಜಾತಿ ಜನಾಂಗದವರ ಜೊತೆ ನಿಕಟ ಸಂಪರ್ಕವಿಟ್ಟುಕೊಂಡಿದ್ದಾರೆ. ಚಿತ್ರದುರ್ಗದಲ್ಲಿ ಮೊದಲು ಸಿ.ಸಿ.ರಸ್ತೆ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಎಲ್ಲರ ಕಷ್ಟ-ಸುಖಗಳಿಗೆ ಸ್ಪಂದಿಸುವ ಗುಣವುಳ್ಳ ಇವರಿಗೆ ಇನ್ನು ದೊಡ್ಡ ದೊಡ್ಡ ಪ್ರಶಸ್ತಿಗಳು ಹುಡುಕಿಕೊಂಡು ಬರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಟಿ.ಕೃಷ್ಣಮೂರ್ತಿ ನಗರಸಭೆ ಅಧ್ಯಕ್ಷನಾಗಿದ್ದಾಗ ಕೈಲಾದಷ್ಟು ಊರಿಗೆ ಒಳ್ಳೆಯದು ಮಾಡಿದ್ದೇನೆ. ಈಗಲೂ ಜನಸೇವೆಯಿಂದ ಹಿಂದೆ ಸರಿದಿಲ್ಲ. ಮೊದಲಿನಿಂದಲೂ ಮುಸ್ಲಿಂ ಜನಾಂಗದವರೊಡನೆ ಸ್ನೇಹ ಸಂಬಂಧವಿಟ್ಟುಕೊಂಡಿದ್ದೇನೆ. ಚುನಾವಣೆಯಲ್ಲಿ ಸೋತಿದ್ದರು ವಾರ್ಡ್ನ ಜನತೆಯ ಸಮಸ್ಯೆಗಳನ್ನು ಆಲಿಸಿ ಕೆಲಸ ಮಾಡುತ್ತಿದ್ದೇನೆ. ಕಾಯಕ ಯೋಗಿ ಪ್ರಶಸ್ತಿ ನೀಡಿ ಸನ್ಮಾನಿಸಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಹೇಳಿದರು.
ತಾಲ್ಲೂಕು ಕಚೇರಿಯ ಶ್ರೀನಿವಾಸ್, ಕೂನಿಕೆರೆ ರಾಮಣ್ಣ, ಜಗಣ್ಣ, ಸಲ್ಮಾನ್, ಮದ್ದನಕುಂಟೆ ಸಂಪತ್, ಗರಡಿ ತಿಮ್ಮಣ್ಣ, ನಿವೃತ್ತ ಸಬ್ಇನ್ಸ್ಪೆಕ್ಟರ್ ಪ್ರಾಣೇಶ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.




