ಸುದ್ದಿಒನ್, ಚಿತ್ರದುರ್ಗ, ಮೇ.07 : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ಸಾರ್ವಜನಿಕ ಜೀವನದ ಪ್ರಯಾಣವನ್ನು ಸ್ಮರಿಸುವ ‘ಬಿ.ಎಸ್.ವೈ ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರ ಜೀವನ ಮತ್ತು ಸಾಧನೆಗಳ ಕುರಿತಾದ ಎರಡು ಪ್ರಮುಖ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ.
ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಈ ಐತಿಹಾಸಿಕ ಸಮಾವೇಶದಲ್ಲಿ ಪುಸ್ತಕಗಳ ಲೋಕಾರ್ಪಣೆ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್. ರಘು (ಕೌಟಿಲ್ಯ) ತಿಳಿಸಿದ್ದಾರೆ.

ಬಿಡುಗಡೆಯಾಗಲಿರುವ ಪುಸ್ತಕಗಳ ವಿವರ
‘ಕೆಂದಾವರೆ-ಕಮಲ ಅರಳಿದ ಕಥೆ’
ಇದು ಬಿ.ಎಸ್.ವೈ ಅವರ ಜೀವನ ಚರಿತ್ರೆಯಾಗಿದ್ದು, ಅವರ ಬಾಲ್ಯದಿಂದ ಇಂದಿನವರೆಗಿನ ಪ್ರಮುಖ ಘಟ್ಟಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. ಬರಹಗಾರ ಆರ್. ರಘು ಈ ಕೃತಿಯನ್ನು ನಿರೂಪಿಸಿದ್ದಾರೆ.
ಸದನ ಶಿಕಾರಿ-ಯಡಿಯೂರಪ್ಪನವರ ಗುಡುಗಿನ ನುಡಿಗಳು
ಯಡಿಯೂರಪ್ಪನವರು ತಮ್ಮ ಸುದೀರ್ಘ ಶಾಸಕತ್ವದ ಅವಧಿಯಲ್ಲಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಾಡಿದ ಆಯ್ದ ಭಾಷಣಗಳ ಸಂಗ್ರಹ ಇದಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ಮತ್ತು ಆಡಳಿತ ಪಕ್ಷದಲ್ಲಿದ್ದಾಗ ಅವರು ರೈತರು ಹಾಗೂ ಜನಪರ ಹಿತಾಸಕ್ತಿಗಾಗಿ ನಡೆಸಿದ ಹೋರಾಟದ ಮಾತುಗಳು ಇದರಲ್ಲಿವೆ.



















