ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರೀ ಕುತೂಹಲ ಮೂಡಿಸಿದ್ದ ‘ಬಾಸ್’ ಚಿತ್ರದ ಬಿಡುಗಡೆಗೆ ಎದುರಾಗಿದ್ದ ಕಾನೂನು ಅಡೆತಡೆಗಳು ಕೊನೆಗೂ ನಿವಾರಣೆಯಾಗಿವೆ.
ಚಿತ್ರದ ಪ್ರದರ್ಶನಕ್ಕೆ ತಡೆ ನೀಡುವಂತೆ ಕೋರಿ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಚಿತ್ರದ ತೆರೆಕಾಣುವಿಕೆಗೆ ನ್ಯಾಯಾಲಯವು ಹಸಿರು ನಿಶಾನೆ ತೋರಿದ್ದು, ಇಂದಿನಿಂದಲೇ ರಾಜ್ಯಾದ್ಯಂತ ‘ಬಾಸ್’ ಅಬ್ಬರ ಶುರುವಾಗಲಿದೆ. ಹೈಕೋರ್ಟ್ನ ಈ ಮಹತ್ವದ ತೀರ್ಪಿನಿಂದಾಗಿ ನಿರಾಳವಾಗಿರುವ ಚಿತ್ರತಂಡವು ಸಂಭ್ರಮದಲ್ಲಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಲವ ವಿ. ಸಂತೋಷ್, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನದ ಆಶಯ ಎತ್ತಿಹಿಡಿದ ನ್ಯಾಯಾಂಗಕ್ಕೆ ಧನ್ಯವಾದ ಅರ್ಪಿಸಿದರು. ಸಿನಿಮಾ ತಡವಾಗಿದ್ದರಿಂದ ಕೋಟ್ಯಂತರ ರೂಪಾಯಿ ನಷ್ಟ ಹಾಗೂ ಮಾನಸಿಕ ಸಂಕಟ ಎದುರಿಸಬೇಕಾಗಿ ಬಂದರೂ, ತಮಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.


ಚಿತ್ರವನ್ನು ತಡೆಯಲು ಹಲವರು ಅಪಪ್ರಚಾರ ಹಾಗೂ ಸುಳ್ಳು ಮಾಹಿತಿಗಳನ್ನು ಹರಡುವ ಪ್ರಯತ್ನ ನಡೆಸಿದ್ದರು ಎಂದು ಬೇಸರ ವ್ಯಕ್ತಪಡಿಸಿದ ಚಿತ್ರತಂಡ, ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ ಎಂದಿದೆ. ವಿರೋಧ ವ್ಯಕ್ತಪಡಿಸಿದವರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದ ತಂಡ, ಸದ್ಯದ ಗಮನವೇನಿದ್ದರೂ ಸಿನಿಮಾವನ್ನು ಯಶಸ್ವಿಯಾಗಿ ಪ್ರೇಕ್ಷಕರಿಗೆ ತಲುಪಿಸುವುದಾಗಿದೆ ಎಂದು ತಿಳಿಸಿದೆ.
ತನುಷ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸಿದ್ಧವಾಗಿರುವ ‘ಬಾಸ್’ ಚಿತ್ರವು ಇಂದಿನ ಸಂಜೆಯ ಪ್ರದರ್ಶನಗಳಿಂದಲೇ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದ್ದು, ಕಾನೂನು ಹೋರಾಟದ ಬಳಿಕ ತೆರೆಗೆ ಬರುತ್ತಿರುವುದರಿಂದ ಚಿತ್ರಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.








