ಜನತಾ ದರ್ಶನದಲ್ಲಿ ವೇದಿಕೆಯಲ್ಲೇ ಕಿತ್ತಾಡಿಕೊಂಡ ಬಿಜೆಪಿ ಸಂಸದ ಹಾಗೂ ಕಾಂಗ್ರೆಸ್ ಶಾಸಕ..!

1 Min Read

 

ಕೋಲಾರ: ಇಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಹತ್ವದ ಬೆಳವಣಿಗೆಯ ದಿನ. ರಾಜ್ಯಾದ್ಯಂತ ಒಂದೇ ದಿನ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಈ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಹಾಗೂ ಕಾಂಗ್ರೆಸ್ ಶಾಸಕ ತುಂಬಿದ ಸಭೆಯಲ್ಲಿಯೇ ಎಲ್ಲರ ಮುಂದೆ ಕಿತ್ತಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಭೂಗಳ್ಳರನ್ನು ಪಕ್ಕದಲ್ಲಿ ಇಟ್ಟುಕೊಂಡು ಸಭೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಮುನಿಸ್ವಾಮಿ ಹೇಳಿದರು ಎನ್ನಲಾಗುತ್ತಿದೆ. ಈ ವಿಚಾರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ತುಂಬಿದ ಸಭೆಯಲ್ಲಿ ಸಂಸದ ಮುನಿಸ್ವಾಮಿ ಹಾಗೂ ಶಾಸಕ ನಾರಾಯಣಸ್ವಾಮಿ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಈ ವೇಳೆ ವೇದಿಕೆ ಮೇಲೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು ಕೂಡ ಇದ್ದಾರೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ಸಭೆಯಲ್ಲಿದ್ದ ಪೊಲೀಸರು ಹಾಗೂ ಸಚಿವ ಭೈರತಿ ಬಸವರಾಜು ಸಮಾಧಾನ ಮಾಡಿದ್ದಾರೆ. ಗಲಾಟೆ ಬಿಡಿಸಿ, ಸಭೆ ನಡೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ.

ಜನರ ಸಣ್ಣ ಸಣ್ಣ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಸಿಕ್ಕಲ್ಲೆಲ್ಲಾ ಸಣ್ಣ ಪುಟ್ಟ ಸಮಸ್ಯೆಗಳನ್ನೆ ತರುತ್ತಾರೆ ಜನ. ಅಲ್ಲಿನ ಸಮಸ್ಯೆಗಳನ್ನ ಆಲಿಸಿ, ಪರಿಹಾರ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಅದರಂತೆ ಇಂದು ಜನತಾ ದರ್ಶನ ಏರ್ಪಡಿಸಿದ್ದಾರೆ. ಆದರೆ ಜನರ ಸಮಸ್ಯೆಯನ್ನು ಆಲಿಸಬೇಕಾದ ಅಧಿಕಾರಿಗಳೇ ಹೀಗೆ ಜನರ ಮುಂದೆ ಕಿತ್ತಾಡಿಕೊಂಡು ಕೂತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *