ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವನ ಪ್ರಕರಣದಲ್ಲಿ ಈಗಾಗಲೇ ಶಾಸಕ ಭೈರತಿ ಬಸವರಾಜ್ ಅರೆಸ್ಟ್ ಆಗಿದ್ದಾರೆ. ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಈ ಬೆನ್ನಲ್ಲೇ ಭೈರತಿ ಬಸವರಾಜ್ ಅವರನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ವಿಚಾರಣೆಯ ಕಾರಣ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ.
ಇಂದು ಬೆಳಗ್ಗೆಯೇ ಭೈರತಿ ಬಸವರಾಜ್ ಅವರಿಗೆ ಮೆಡಿಕಲ್ ಚೆಕಪ್ ಮಾಡಿಸಲಾಗಿತ್ತು. ಇದೀಗ ಪೊಲೀಸ್ ಕಸ್ಟಡಿಯಲ್ಲಿರೋ ಕಾರಣ ಭಾರತೀ ನಗರ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಈ ಹಿಂದೆಯೇ ಭೈರತಿ ಬಸವರಾಜ್ ಭಾರತೀ ನಗರ ಪೊಲೀಸರ ಹಾದಿಯನ್ನ ತಪ್ಪಿಸಿದ್ದರು. A1 ಸ್ಥಾನದಲ್ಲಿರುವ ಆರೋಪಿ ಜಗ್ಗನ ಪರಿಚಯವೇ ಇಲ್ಲ ಎಂದು ಹೇಳಿಕೆ ನೀಡಿದ್ದರು. ಕೊಲೆ ಪ್ರಕರಣಕ್ಕೂ ತಮಗೂ ಸಂಬಂಧವೇ ಇಲ್ಲ ಅಂದಿದ್ದರು. ಆದ್ರೆ ಭೈರತಿ ಬಸವರಾಜ್ ವಿರುದ್ಧ ಸಿಐಡಿ ಪೊಲೀಸರು ಸಾಕ್ಷಿಗಳನ್ನು ಸಂಗ್ರಹಿಸಿದ್ದರು. ಇದೀಗ 14 ದಿನಗಳ ಕಾಲ ಪೊಲೀಸರಿಗೆ ಅತಿಥಿಯಾಗಿಯೇ ಇರಲಿದ್ದಾರೆ.
ಈ ಹಿಂದೆ ಜಮೀನು ವಿಚಾರಕ್ಕೆ ಬಿಕ್ಲು ಶಿವ ಹಾಗೂ ಭೈರತಿ ಬಸವರಾಜ್ ಬೆಂಬಲಿಗರ ನಡುವೆ ಗಲಾಟೆ ನಡೆದಿತ್ತು. ಸಿಂಗಾರೆಡ್ಡಿಗೆ ಸೇರಿದ್ದ ಜಮೀನನ್ನ ಬಿಕ್ಲು ಶಿವ ಜಿಪಿಎ ಮಾಡಿಸಿಕೊಂಡಿದ್ದ. ಈ ಬಗ್ಗೆ ಗಲಾಟೆ ಕೂಡ ಆಗಿತ್ತು. ಬಳಿಕ ಜಿಪಿಎ ಕ್ಯಾನ್ಸಲ್ ಮಾಡಿ, ಪೊಸಿಷನ್ ಬಿಟ್ಟು ಕೊಡಲು ಜಗ್ಗನ ಗ್ಯಾಂಗ್ ಬೆದರಿಕೆ ಹಾಕಿತ್ತು. ಈ ಬೆದರಿಕೆ ಬಗ್ಗೆ ಬಿಕ್ಲು ಶಿವ ಕಳೆದ ವರ್ಷ ಕಮಿಷನರ್ ಗೆ ದೂರು ನೀಡಿದ್ದ. ಅಲ್ಲಿ ಭೈರತಿ ಬಸವರಾಜ್, ಜಗ್ಗ, ಕಿರಣ್ ಅವರ ಹೆಸರನ್ನ ಹೇಳಿದ್ದ. ಅದಾದ ನಾಲ್ಕೇ ತಿಂಗಳಿಗೆ ಶಿವನ ಕೊಲೆಯಾಗಿತ್ತು.


