ಬಿಜೆಪಿ ಮೊದಲಿನಿಂದಲೂ ಎಸ್ಸಿ. ಎಸ್ಟಿ. ಹಿಂದುಳಿದವರ ವಿರೋಧಿ : ಬಿ.ಯೋಗೇಶ್‍ಬಾಬು

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 30  : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆಗೆ ಸಚಿವ ನಾಗೇಂದ್ರ ತಲೆದಂಡಕ್ಕೆ ಬಿಜೆಪಿಯವರು ಪಟ್ಟು ಹಿಡಿದಿರುವುದನ್ನು ದ್ರಾಕ್ಷಿ ಮತ್ತು ವೈನ್ಸ್ ಮಂಡಳಿ ಚೇರ್ಮನ್ ಬಿ.ಯೋಗೇಶ್‍ಬಾಬು ಖಂಡಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇಲಾಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಚಂದ್ರಶೇಖರನ್ ಎಲ್ಲಿಯೂ ಸಚಿವ ನಾಗೇಂದ್ರರವರ ಹೆಸರನ್ನು ನಮೂದಿಸಿಲ್ಲ ಎಂದು ಅಧಿಕಾರಿ ಪತ್ನಿಯೇ ಹೇಳಿಕೆ ನೀಡಿದ್ದಾರೆ. ಆದಾಗ್ಯೂ ಬಿಜೆಪಿ.ಯವರು ರಾಜ್ಯದ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿರುವುದರಲ್ಲಿ ಅರ್ಥವಿಲ್ಲ. ಪ್ರಾಣ ಕಳೆದುಕೊಂಡಿರುವ ಚಂದ್ರಶೇಖರನ್ ಕುಟುಂಬದ ಜೊತೆ ಸರ್ಕಾರವಿದೆ. ಮೂವರು ಅಧಿಕಾರಿಗಳ ವಿರುದ್ದ ಎಫ್.ಐ.ಆರ್. ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವರದಿ ಬರುವತನಕ ಕಾಯಬೇಕು ಎಂದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಕ್ಕೆ ರಾಜ್ಯ ಸರ್ಕಾರ ಈಗಾಗಲೆ ಬೇರೆ ಅಧಿಕಾರಿಯನ್ನು ನೇಮಿಸಿದೆ. ಬಿಜೆಪಿಯ ವಿಜಯೇಂದ್ರ, ಅಶ್ವಥನಾರಾಯಣ ಇವರುಗಳು ಸಚಿವ ನಾಗೇಂದ್ರ ತಲೆದಂಡಕ್ಕೆ ಪಟ್ಟು ಹಿಡಿದಿರುವುದನ್ನು ನೋಡಿಕೊಂಡು ಸುಮ್ಮನಿರಲು ಆಗುವುದಿಲ್ಲ. ರಾಜ್ಯದಲ್ಲಿ ಐವತ್ತು ಲಕ್ಷದಷ್ಟು ಪರಿಶಿಷ್ಠ ವರ್ಗದವರಿದ್ದೇವೆ. ಸಚಿವರ ರಾಜಿನಾಮೆಯ ಅವಶ್ಯಕತೆಯಿಲ್ಲ. ಬಿಜೆಪಿ ಮೊದಲಿನಿಂದಲೂ ಎಸ್ಸಿ. ಎಸ್ಟಿ. ಹಿಂದುಳಿದವರ ವಿರೋಧಿ ಎನ್ನುವುದು ಗೊತ್ತಿದೆ ಎಂದು ವಿರೋಧಿಗಳಿಗೆ ಬಿ.ಯೋಗೇಶ್‍ಬಾಬು ತಿರುಗೇಟು ನೀಡಿದರು.

ನಿಗಮದ ಖಾತೆಯಿಂದ ವಿವಿಧ ಬ್ಯಾಂಕ್‍ಗಳ ಖಾತೆಗೆ ಹಣ ವರ್ಗಾವಣೆಯಾಗಿರುವುದಕ್ಕೂ ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಚಂದ್ರಶೇಖರನ್‍ರವರಿಗೂ ಸಂಬಂಧವಿಲ್ಲ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದಲ್ಲಿ ಕ್ರಿಯಾಶೀಲ ಅಧಿಕಾರಿಯಾಗಿದ್ದರು. ಆದರೆ ಮೇಲಾಧಿಕಾರಿಗಳ ಕಿರುಕುಳ ಹಾಗೂ ಒತ್ತಡಕ್ಕೆ ಆತ್ಮಹತ್ಯೆಯಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳಿದರು.

ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ಜಿ.ಬಿ.ಬಾಲಕೃಷ್ಣಸ್ವಾಮಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡ ವಿಭಾಗದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್, ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಎಸ್ಸಿ. ವಿಭಾಗದ ಅಧ್ಯಕ್ಷ ಜಯಣ್ಣ, ಜಿ.ವಿ.ಮಧುಗೌಡ, ಶಶಾಂಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *