ಕುರಿಗೆ ಹುಟ್ಟುಹಬ್ಬದ ಸಂಭ್ರಮ : ಕರ್ಪಿ ಎಂದು ನಾಮಕರಣ..!

2 Min Read

ಸುದ್ದಿಒನ್, ಹಿರಿಯೂರು, ಮೇ. 03 : ಸಾಮಾನ್ಯವಾಗಿ ಮನುಷ್ಯರು ಜನ್ಮ ದಿನಾಚರಣೆ ಮಾಡಿಕೊಳ್ಳುವುದು ವಿಶೇಷ. ಬರ್ತಡೇ, ಮದುವೆ, ಇನ್ನಿತರ ಸಂಭ್ರಮದ ಕ್ಷಣಗಳನ್ನು ಸವಿಯಲು ಕೇಕ್ ಕತ್ತರಿಸುವುದು ರೂಡಿಯಲ್ಲಿದೆ. ಆಧುನಿಕತೆಯ ಭರಾಟೆಯಲ್ಲಿ ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆಚರಣೆಗಳು ಹುಟ್ಟಿಕೊಳ್ಳುತ್ತವೆ. ಹೌದು ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಿಗೆ ಸೀಮಂತ, ಹುಟ್ಟು ಹಬ್ಬ ಆಚರಣೆಗಳು ನಡೆಯುತ್ತಿರುವುದು ಸರ್ವೇ ಸಾಮಾನ್ಯ. ಇದೇ ರೀತಿ ಕುರಿ ಮಾಲೀಕ ಕುರಿಗೆ ಬರ್ತಡೇ ಆಚರಿಸುರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.

ಹೌದು ತಾಲೂಕಿನ ಮಸ್ಕಲ್ ಟಿ. ಬಿ. ಗೊಲ್ಲರಹಟ್ಟಿ ಗ್ರಾಮದ ಕೃಷ್ಣಮೂರ್ತಿ ಎಂಬ ಕುರಿ ಮಾಲೀಕನಿಗೆ ಸೇರಿದ ಹೆಣ್ಣು ಕುರಿಯೊಂದು ನಾಲ್ಕು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಶುಕ್ರವಾರ ರಾತ್ರಿ ಕುರಿಗೆ ನಾಲ್ಕನೇ ವರ್ಷದ ಬರ್ತಡೇ ಆಚರಣೆ ಮಾಡಿದ್ದಾರೆ.

2021 ಮೇ 2ರಂದು ಕುರಿ ಜನಿಸಿದ್ದು, ಈ ಕುರಿಗೆ “ಕರ್ಪಿ” ಎಂದು ನಾಮಕರಣ ಮಾಡಲಾಗಿದೆ. ಮೇ 2ಕ್ಕೆ ನಾಲ್ಕು ವರ್ಷ ಪೂರೈಸಿದೆ. ಗ್ರಾಮದ ಕೃಷ್ಣಮೂರ್ತಿ ಅವರು ಹಳೇಹಟ್ಟಿಯಲ್ಲಿ ಕುರಿಗೆ ಕಾಲಿಗೆ ಬೆಳ್ಳಿ ಕಡಗ ತೊಡಿಸಿ, ಕೇಕ್ ಕತ್ತರಿಸುವ ಮೂಲಕ ತನ್ನ ಪ್ರೀತಿಯ ಕುರಿಗೆ ಹುಟ್ಟು ಹಬ್ಬ ಆಚರಿಸಿದರು.

ಈ ಹಿಂದೆ ಕೃಷ್ಣಮೂರ್ತಿ ಪ್ರೀತಿಯಿಂದ ಒಂದು ಕುರಿಮರಿ ಸಾಕಿದ್ದರು. ಕುರಿ ದೊಡ್ಡದಾದ ಬಳಿಕ ಒಂದು ಹೆಣ್ಣು ಕುರಿ ಮರಿಗೆ ಜನ್ಮ ನೀಡಿದೆ. ಕಾರಣಾಂತರಗಳಿಂದ ಜನ್ಮ ನೀಡಿದ ಕುರಿ ಸಾವನ್ನಪ್ಪಿದೆ. ಅನಾಥವಾಗಿದ್ದ ಸಣ್ಣ ಕುರಿ ಮರಿಯ ಜೊತೆಗೆ ಇನ್ನೊಂದು ಕುರಿ ಮರಿ ತಂದು ಎರಡು ಮರಿಗಳನ್ನು ಸಾಕಿದ್ದಾರೆ. ಆದರೆ ತಬ್ಬಲಿಯಾಗಿದ್ದ ಕುರಿ ಮರಿ ದೊಡ್ಡದಾಗಿ ಬೆಳೆದು ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮೊದಲನೇ ವರ್ಷದಲ್ಲಿ ಐದು ಕೆಜಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಎರಡನೇ ಬಾರಿಗೆ ಮೂರು ಕೆಜಿ ಕೇಕ್ ಕತ್ತರಿಸಿ ಜನ್ಮ ದಿನಾಚರಣೆ ಆಚರಿಸಿದ್ದರು. ಮೂರನೇ ವರ್ಷ 5ಕೆಜಿ ಕೇಕ್ ಕತ್ತರಿಸಿದ್ದು, ಇದೀಗ ನಾಲ್ಕನೇ ವರ್ಷದಲ್ಲಿ 2ಕೆಜಿ ಕೆಕ್ ಕತ್ತರಿಸುವ ಮೂಲಕ ಜನ್ಮದಿನಾಚರಣೆ ಕಾರ್ಯಕ್ರಮ ಮಾಡಿದ್ದಾರೆ.

ಇಷ್ಟೆ ಅಲ್ಲದೇ ಕುರಿ ಮಾಲೀಕ ಗ್ರಾಮದ ಅಕ್ಕಪಕ್ಕದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಕುರಿ ಮಾಲೀಕನ ಕರೆಗೆ ಓಗೊಟ್ಟು ಸ್ನೇಹಿತರು, ಗ್ರಾಮಸ್ಥರು ಬರ್ತಡೇ ಸಮಾರಂಭದಲ್ಲಿ ಭಾಗವಹಿಸಿ ಕುರಿಗೆ ಹ್ಯಾಪಿ ಬರ್ತಡೇ ಕರ್ಪಿ ಎಂದು ಶುಭಾಶಯ ಕೋರಿದ್ದಾರೆ.

ಕುರಿಯ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಕೇಕ್, ಕಾರ ಹಾಗೂ ಜ್ಯೂಸ್ ಹಂಚಿದರು.

ಕುರಿ ಮಾಲೀಕ ಕೃಷ್ಣಮೂರ್ತಿ ಮಾತನಾಡಿ “ನಾನು 5 ವರ್ಷದ ಹಿಂದೆ ಒಂದು ಕುರಿ ಸಾಕಿದ್ದೆ. ಅದು ಒಂದು ಮರಿಗೆ ಜನ್ಮ ನೀಡಿ, ಮೃತಪಟ್ಟಿತ್ತು. ತಾಯಿಯನ್ನು ಕಳೆದುಕೊಂಡ ಮರಿ ಅನಾರೋಗ್ಯಕ್ಕೆ ತುತ್ತಾಗಿತ್ತು. ಅದನ್ನು ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿ, ಗುಣಪಡಿಸಿಲಾಯಿತು. ನಂತರ ಕುರಿ ಮರಿ ನಮ್ಮೊಂದಿಗೆ ಬೆರೆಯಿತು. ಆಗಾಗಿ ನನಗೆ ತುಂಬಾ ಇಷ್ಟವಾಯಿತು. ನಾಲ್ಕು ವರ್ಷಗಳಿಂದ ಕುರಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡು ಬರುತ್ತಿದ್ದೇನೆ. ಈ ವರ್ಷದಲ್ಲಿ ಕುರಿಯ ಕಾಲಿಗೆ ಬೆಳ್ಳಿ ಕಡಗ ಮಾಡಿಸಿದ್ದೇನೆ. ಮುಂದಿನ ವರ್ಷ ಕೂಡ ಹುಟ್ಟು ಹಬ್ಬ ಆಚರಿಸಲಾಗುತ್ತದೆ. ಕುರಿಯನ್ನು ಯಾರಿಗೂ ಕೊಡುವುದಿಲ್ಲ, ಹಾಗೂ ಕೊಯ್ಯುವುದು ಇಲ್ಲ. ಮನೆಯ ಸದಸ್ಯನಾಗಿ ಇರುತ್ತದೆ. ಕುರಿಯ ಜೀವ ಇರುವವರೆಗೂ ನಾನು ಅದರ ಹುಟ್ಟು ಹಬ್ಬ ಆಚರಣೆ ಮಾಡುತ್ತೇನೆ” ಎಂದು ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *