ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಹಣ ದುರುಪಯೋಗಕ್ಕೆ ಬ್ರೇಕ್ ಹಾಕಲು ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದೆ. ಇನ್ಮುಂದೆ ಯೋಜನೆಯ ಫಲಾನುಭವಿಗಳ ಗುರುತನ್ನು ಪತ್ತೆಹಚ್ಚಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯನ್ನು ಮುಂದಿನ ತಿಂಗಳಿಂದ ಕಡ್ಡಾಯಗೊಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ.
ಹೊಸ ನಿಯಮಗಳ ಪ್ರಕಾರ, ಯೋಜನೆಯಡಿ ಪ್ರತಿ ತಿಂಗಳು ₹2,000 ಬ್ಯಾಂಕ್ ಖಾತೆಗೆ ಪಡೆಯುತ್ತಿರುವ ಮಹಿಳೆಯರು ಕಡ್ಡಾಯವಾಗಿ ಒಮ್ಮೆ ಬಯೋಮೆಟ್ರಿಕ್ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಯೋಮೆಟ್ರಿಕ್ ನೋಂದಣಿಗಾಗಿ ಪ್ರತಿ ಫಲಾನುಭವಿಯಿಂದ ₹5 ಸೇವಾ ಶುಲ್ಕವನ್ನು ಪಡೆಯಲು ಇಲಾಖೆ ಚಿಂತನೆ ನಡೆಸಿದೆ.
ಸರ್ಕಾರದ ಪ್ರಾಥಮಿಕ ಯೋಜನೆಯ ಪ್ರಕಾರ, ಬೆಂಗಳೂರು ಒನ್ ಕೇಂದ್ರಗಳು,ಗ್ರಾಮ ಒನ್ ಕೇಂದ್ರಗಳು,ಸೇವಾಸಿಂಧು ಸೇವಾ ಕೇಂದ್ರಗಲ್ಲಿ ಬಯೋಮೆಟ್ರಿಕ್ ಮಾಡಿಸಿಕೊಳ್ಳಬೇಕು.ಬಯೋಮೆಟ್ರಿಕ್ ನೋಂದಣಿಗೆ ತೆರಳುವಾಗ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಆಧಾರ್ ಆಧಾರಿತ ಬಯೋಮೆಟ್ರಿಕ್ ಯಶಸ್ವಿಯಾದ ನಂತರವೇ ಹಣದ ವರ್ಗಾವಣೆ ಪ್ರಕ್ರಿಯೆ ಸುಗಮವಾಗಲಿದೆ.






