ಬಡ್ಡಿಯೇ ಇಲ್ಲದೆ ಸಾಲ ಕೊಡುವ ಕಂಪನಿ ಅಥವಾ ವ್ಯಕ್ತಿಗಳಿಂದ ಎಚ್ಚರವಹಿಸಿ : ಸಾರ್ವಜನಿಕರಲ್ಲಿ ಎಸ್.ಪಿ. ಮನವಿ

1 Min Read

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 28 : ವಂಚಕರು ಯಾವಾಗ, ಹೇಗೆ ಮೋಸ ಮಾಡ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಇದೀಗ ಬಡ್ಡಿ ಇಲ್ಲದೆ ಸಾಲ ಕೊಡ್ತೀವಿ ಅಂತ ಬರುವವರ ಬಗ್ಗೆ ಎಚ್ಚರವಿರಲಿ. ಈ ಬಗ್ಗೆ ಚಿತ್ರದುರ್ಗ ಎಸ್ಪಿ ಮಾಹಿತಿ ನೀಡಿದ್ದಾರೆ.

ಇತ್ತಿಚಿನ ದಿನಗಳಲ್ಲಿ ಕಂಪನಿಗಳು, ಸಂಸ್ಥೆಗಳ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಸರ್ಕಾರದಿಂದ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಯಾವುದೇ ಅನುಮತಿಯನ್ನು ಪಡೆಯದೆ ಕೇವಲ ಒಂದು ಕಂಪನಿಯ ಹೆಸರಿನಲ್ಲಿ ಶೂನ್ಯ ಬಡ್ಡಿ ( 0 %) ದರಕ್ಕೆ ಹೆಚ್ಚಿನ ಹಣ ಕೊಡುವುದಾಗಿ ಸಾರ್ವಜನಿಕರಿಂದ ಕೇವಲ ಆಧಾರ್ ಕಾರ್ಡ್, ಒಂದು ಭಾವಚಿತ್ರವನ್ನು ಪಡೆದುಕೊಂಡು ಹಣವನ್ನು ಸಂದಾಯ ಮಾಡಿಸಿಕೊಂಡು ತದನಂತರ ಸಾರ್ವಜನಿಕರಿಗೆ ಯಾವುದೇ ಹಣವನ್ನು ನೀಡದೆ ಇರುವ ಬಗ್ಗೆ ದೂರುಗಳು ದಾಖಲಾಗುತ್ತಿವೆ.

ಇದೇ ರೀತಿ ಚಿತ್ರದುರ್ಗ ನಗರದಲ್ಲಿಯೂ ಸಹ ಯಾವುದೇ ಅಧೀಕೃತ ಪರವಾನಗಿಯನ್ನು ಪಡೆಯದೆ ಟ್ರಸ್ಟ್ ನ ಹೆಸರಿನಲ್ಲಿ ವಾಹನ ನಿಧಿ, ಗ್ರಾಹಕ ನಿಧಿ, ಶಿಕ್ಷಣ ನಿಧಿ, ಕೃಷಿ, ಮನೆ ನವೀಕರಣ ನಿಧಿ, ಸೂಕ್ಷ್ಮ ವ್ಯಾಪಾರ ನಿಧಿ ಇವುಗಳ ಹೆಸರಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಎಲ್.ಕೆ.ಜಿ ಯಿಂದ ಪಿ.ಜಿ ವರೆಗೆ ವಾರ್ಷಿಕ ವಿದ್ಯಾರ್ಥಿ ನಿಧಿ ಈಗ್ಗೆ 5,000/- ರೂಗಳಿಂದ 4,50,000/- ರೂಗಳವರೆಗೆ ಸಾಲ ನೀಡುವುದಾಗಿ ಸಾರ್ವಜನಿಕರಿಂದ ಸದರಿ ಟ್ರಸ್ಟ್ ಗೆ ಡೋನೇಷನ್ ರೂಪದಲ್ಲಿ ಹಣವನ್ನು ಸಂಗ್ರಹ ಮಾಡುತ್ತಿದ್ದಾರೆ ಅಂತ ವ್ಯಕ್ತಿಯೊಬ್ಬರು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದಾರೆ.

ಈ ಸಂಬಂಧ ತನಿಖೆ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಇಂತಹ ಅನಧಿಕೃತ ಕಂಪನಿಗಳ ಮತ್ತು ವ್ಯಕ್ತಿಗಳ ಬಗ್ಗೆ ಜಾಗರೂಕತೆಯಿಂದ ಇದ್ದು ಅಧಿಕೃತವಾಗಿ ಸರ್ಕಾರದ ಅನುಮೋದನೆ ಪಡೆದಿರುವ ಬ್ಯಾಂಕ್‌ ಗಳು ಮತ್ತು ಸರ್ಕಾರದಿಂದ ಅನುಮೋದನೆ ಪಡೆದಂತಹ ಸಂಘ- ಸಂಸ್ಥೆಗಳ ಬಗ್ಗೆ ಪೂರ್ವಪರ ತಿಳಿದುಕೊಂಡು ನಂತರ ಮಾತ್ರವೇ ತಮ್ಮ ಹಣವನ್ನು ಹೂಡಿಕೆ ಮಾಡಲು ಹಾಗೂ ಇಂತಹ ಕಂಪನಿಗಳ ಮತ್ತು ವ್ಯಕ್ತಿಗಳೊಂದಿಗೆ ಎಚ್ಚರಿಕೆಯಿಂದ ಇರಬೇಕೆಂದು ಚಿತ್ರದುರ್ಗ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *