ಬೆಂಗಳೂರು: ಮಿಷನ್ ಪ್ರಕೃತಿ.. ತರಗತಿಯಿಂದ ಸಂರಕ್ಷಣೆಯತ್ತ ಎಂಬ ಕಾರ್ಯಕ್ರಮದಲ್ಲಿ ರಾಜ್ಯದ 10 ಶಾಲೆಗಳು ಅತ್ಯುತ್ತಮ ಶಾಲೆಗಳು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿವೆ. ಈ ಅತ್ಯುತ್ತಮ ಶಾಲೆಗಳಿಗೆ ಮಧು ಬಂಗಾರಪ್ಪ ಅವರು ಪ್ರಶಸ್ತಿಯನ್ನ ಪ್ರಧಾನ ಮಾಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನ ನೀಡಿ ಗೌರವಿಸಿದ್ದಾರೆ.
ಬಳ್ಳಾರಿಯ ಎಮ್ಮಿಗನೂರಿನಲ್ಲಿರುವ ಜೆ.ಎಂ.ಪಿ.ಎಚ್.ಎಸ್ ಶಾಲೆ, ಬೆಳಗಾವಿಯ ಕಾಗವಾಡದ ಕಾತ್ರಾಳ ಶಾಲೆ, ಚಿಕ್ಕಬಳ್ಳಾಪುರದ ಅಲಿಪುರದಲ್ಲಿರುವ ಶಾಲೆ, ದಾವಣಗೆರೆಯ ಹಿರೇಗೋಣಿಗೆರೆ ಶಾಲೆ, ಕಲಘಟಗಿಯ ಜೋಡಳ್ಳಿಯಲ್ಲಿರುವ ಶಾಲೆ, ಉಡುಪಿ, ಕುಂದಾಪುರದ ಕೋಟೇಶ್ವರದ ಶಾಲೆ, ದಕ್ಷಿಣ ಕನ್ನಡ ಜಿಲ್ಲೆಯ ಅಳಿಯೂರಿನಲ್ಲಿರುವ ಶಾಲೆ, ಉಡುಪಿ ಜಿಲ್ಲೆಯ ಬೈಂದೂರಿನ ಹಕ್ಲಾಡಿ ಶಾಲೆ, ಚಾಮರಾಜನಗರ ಜಿಲ್ಲೆಯ ಯಳಂದೂರು ಶಾಲೆ, ಉಡುಪಿಯ ಮಲ್ಲೂರು ಶಾಲೆಗೆ ಈ ಪ್ರಶಸ್ತಿಗಳು ಲಭಿಸಿವೆ.
ಇದೇ ವೇಳೆ ಸಂತಸವನ್ನು ಹೊರ ಹಾಕಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದಬಾರದು. ವಿಷಯವನ್ನ ಆಳವಾಗಿ ಅರ್ಥೈಸಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕು. ಅರಿವು ಮೂಡಿದರೆ ಫಲಿತಾಂಶ ತಾನಾಗಿಯೇ ಉತ್ತಮವಾಗುತ್ತದೆ ಎಂದರು. ಜೊತೆಗೆ ತ್ಯಾಜ್ಯ ನಿರ್ವಹಣೆ ಕುರಿತು ಜಪಾನ್ನ ಉದಾಹರಣೆ ನೀಡುತ್ತಾ, ʻಅಲ್ಲಿ ಕಸದ ಬುಟ್ಟಿಗಳು ಕಡಿಮೆ ಇದ್ದರೂ ಜನರು ತಮ್ಮ ಕಸವನ್ನು ತಾವೇ ಮನೆಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡುತ್ತಾರೆ. ಅಂತಹ ಶಿಸ್ತು ನಮ್ಮಲ್ಲಿ ಬರಬೇಕು ಎಂದು ಕಿವಿಮಾತು ಹೇಳಿದ್ರು. ಮುಂದಿನ ವರ್ಷದಿಂದ 1-10ನೇ ತರಗತಿಯವರೆಗೆ ನೈತಿಕ ವಿಜ್ಞಾನವನ್ನು ಪರಿಚಯಿಸಲಾಗುವುದು. ಮಾನವೀಯ ಮೌಲ್ಯಗಳನ್ನ ಅಳವಡಿಸಿಕೊಳ್ಳುವುದು ಶಿಕ್ಷಣದ ಮೊದಲ ಮೆಟ್ಟಿಲು ಎಂದು ಮಕ್ಕಳಿಗೆ ಆತ್ಮವಿಶ್ವಾಸ ತುಂಬಿದರು.



