ಇತ್ತೀಚೆಗಷ್ಟೇ ಬಸವರಾಜ್ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ಇದ್ದಕ್ಕಿದ್ದ ಹಾಗೇ ಆ ನಿರ್ಧಾರದಿಂದ ಹೊರಗೆ ಬಂದಿದ್ದಾರೆ. ಇಂದು ಮಾಧ್ಯಮದವರ ಜೊತೆಗೆ ಮಾತನಾಡುತ್ತಾ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ. ಇವತ್ತಿನ ರಾಜಕಾರಣಿಗಳನ್ನು ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ, ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದಿದ್ದರು. ಈಗ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದಿದ್ದಾರೆ.

ರಾಜೀನಾಮೆ ಸುದ್ದಿ ಹಾರಿದಾಡುತ್ತಿದ್ದಂತೆ ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ಮಾತನಾಡಿದ್ದಾರೆ. 27ನೇ ತಾರೀಖು ಕೂತು ಮಾತನಾಡಿ, ತೀರ್ಮಾನ ಮಾಡೋಣಾ ಎಂದಿದ್ದಾರೆ. ಹೀಗಾಗಿ ರಾಜೀನಾಮೆ ವಿಚಾರವನ್ನ ಅಲ್ಲಿಗೆ ಕೈ ಬಿಟ್ಟಿದ್ದೇನೆ. ಬೆಂಗಳೂರಿನಲ್ಲಿ ಸಭೆ ಮಾಡಬೇಕು ಎಂದುಕೊಂಡಿದ್ದೇವೆ. ಎಲ್ಲರೂ ನೀವೇ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತಿದ್ದಾರೆ. ನಾನು ತೆಗೆದುಕೊಂಡ ತೀರ್ಮಾನಕ್ಕೆ ವಿರೋಧ ವ್ಯಕ್ತವಾಗಿದೆ. ನಮ್ಮ ಶಾಸನ ಸಭೆ ಸದಸ್ಯರು ಕೂಡ ನೋಡೋಣಾ ರಾಜೀನಾಮೆ ಬೇಡ ಎಂದಿದ್ದಾರೆ.

ಪುಟ್ಟಣ್ಣ ಕೂಡ ಕರೆ ಮಾಡಿ ರಾಜೀನಾಮೆ ವಿಚಾರದಲ್ಲಿ ಮುಂದುವರೆಯಬೇಡಿ ಅಂದ್ರು. ಸಾರ್ವಜನಿಕ ವಲಯದಲ್ಲಿ ನನಗೆ ಇಷ್ಟೊಂದು ಗೌರವ ಕೊಡುತ್ತಿರುವುದಕ್ಕೆ ನಾನು ಹಿಂದೆ ಸರಿದಿದ್ದೇನೆ. ಈ ಹಿಂದೆ ಇಂತಹ ಘಟನೆ ಆಗಿಲ್ಲ. ಮಾರ್ಚ್ 19, 20, 21ಕ್ಕೆ ಸದನ ಮುಂದುವರೆಸಲಾಗದಂತೆ ಆಯ್ತು. ಬಜೆಟ್ ಮೇಲೆ ಸಿಎಂ ಉತ್ತರ ಕೊಟ್ಟ ಬಳಿಕ ಹನಿಟ್ರ್ಯಾಪ್ ಉತ್ತರ ಕೊಡಿಸುತ್ತೇನೆ ಎಂದು ಹೇಳಿದ್ದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಹ ಹೇಳಿದ್ದರು. ಅದೇ ಗದ್ದಲದಲ್ಲಿಯೇ ಬಿಲ್ ಪಾಸ್ ಆಯ್ತು. ಚರ್ಚೆಯೇ ಆಗದೆ ಈ ರೀತಿ ಬಿಲ್ ಪಾಸ್ ಆಗಬಾರದು ಎಂದಿದ್ದಾರೆ.


