ಸಿಎಂ ಕುರ್ಚಿ ಉಳಿಸಿಕೊಳ್ಳಲು ಆರ್ಎಸ್ಎಸ್ ಅನ್ನು ಹೊಗಳುತ್ತಿದ್ದಾರೆ: ಸಿದ್ದರಾಮಯ್ಯ

suddionenews
2 Min Read

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇನು ಆರ್ಎಸ್ಎಸ್ನಿಂದ ಬಂದವ್ರಾ? ಸಿಎಂ ಕುರ್ಚಿ ಉಳಿಸಿಕೊಳ್ಳಲು ಆರ್ಎಸ್ಎಸ್ ಅನ್ನು ಹೊಗಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಇನ್ನೂ ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚಾಣಕ್ಯ ವಿವಿ ಸ್ಥಾಪನೆಗೆ ಕೆಐಡಿಬಿ ಭೂಮಿ ನೀಡಲಾಗುತ್ತಿದೆ. ಸಾವಿರಾರು ಕೋಟಿ ಬೆಲೆಯ ಭೂಮಿಯನ್ನು ಕೇವಲ 50 ಕೋಟಿ ರೂಪಾಯಿಗೆ ನೀಡಲು ಹೊರಟಿದ್ದಾರೆ. ಚಾಣಕ್ಯ ವಿವಿ ಆರ್ಎಸ್ಎಸ್ ಪ್ರೇರಿತ. ಆರ್ಎಸ್ಎಸ್ ನವರು ಸೇರಿಕೊಂಡು ವಿಶ್ವವಿದ್ಯಾಲಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಭಾರತ ಹಸಿವಿನ ಸೂಚ್ಯಂಕದಲ್ಲಿ 101ನೇ ಸ್ಥಾನಕ್ಕೆ ಕುಸಿಸಿದೆ. ದೇಶದಲ್ಲಿ ನಿರುದ್ಯೋಗ, ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಅಚ್ಚೇ ದಿನ್ ಎಂದು ಜಾಗತಿಕ ಹಸಿವು ಸೂಚ್ಯಂಕದಲ್ಲಿ ಕಳೆದ ವರ್ಷ 94ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ 101ನೇ ಸ್ಥಾನಕ್ಕೆ ಇಳಿದಿರುವ ವರದಿ ವಿಚಾರವಾಗಿ ಕಿಡಿಕಾರಿದರು. ಅನ್ನ ಭಾಗ್ಯದಿಂದ ಜನರ ಸೋಮಾರಿಗಳಾಗುತ್ತಾರೆ ಎಂಬ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಇದೆಲ್ಲ ಹೊಟ್ಟೆ ತುಂಬಿದವರು ಆಡುವ ಮಾತು. ಉಚಿತ ಅಕ್ಕಿ ಬಗ್ಗೆ ಬಡವರನ್ನು ಕೇಳಿ, ವಾಸ್ತವದ ಅರಿವಾಗುತ್ತದೆ ಎಂದರು.

ಪಕ್ಷದ ಮುಖಂಡರಾದ ಸಲಿಂ ಹಾಗೂ ಉಗ್ರಪ್ಪ ಅವರು ಡಿಕೆ ಶಿವಕುಮಾರ್ ವಿರುದ್ಧ ಆಡಿದ ಮಾತಿನ ಹಿಂದೆ ಸಿದ್ದರಾಮಯ್ಯ ಇದಾರೆ ಎಂಬ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ವಿ.ಎಸ್. ಉಗ್ರಪ್ಪ ನನ್ನ ಶಿಷ್ಯ ಅಲ್ಲ. ಉಗ್ರಪ್ಪ ಒಬ್ಬ ಲೀಡರ್. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿ ಬಂದಿದ್ದಾರೆ. ಜಗದೀಶ್ ಶೆಟ್ಟರ್ ಪೆದ್ದ ಪೆದ್ದನಂಗೆ ಮಾತನಾಡುವುದು ಬಿಡಲಿ. ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಹೇಗೆ ಮಾತನಾಡಬೇಕು ಗೊತ್ತಾಗಲ್ವಾ? ಎಂದು ತರಾಟೆಗೆ ತೆಗೆದುಕೊಂಡರು.

ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಂದೆಡೆ ಪ್ರಚಾರ ನಡೆಸುವುದಿಲ್ಲ ಎಂಬ ಹೇಳಿಕೆಯ ಬಗ್ಗೆಯೂ ಶೆಟ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಬೊಮ್ಮಾಯಿ ಮತ್ತು ಶೆಟ್ಟರ್ ಒಂದೇ ಕಡೆ ಪ್ರಚಾರಕ್ಕೆ ಹೋಗ್ತಾರಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿ.ಎಂ ಇಬ್ರಾಹಿಂ ಅವರನ್ನು ಎಂಎಲ್ಸಿ ಮಾಡಿದ್ದು ಯಾರು? ಟಿಪ್ಪು ಸುಲ್ತಾನ್ ಬಗ್ಗೆ ಇಬ್ರಾಹಿಂ ಓದಿಕೊಂಡು ಮಾತನಾಡಲಿ. ಇಬ್ರಾಹಿಂ ಸಿಕ್ಕರೆ ಓದಿಕೊಂಡು ಬಾ ಎಂದು ಹೇಳುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *