ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188
ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 : ಸಾರಿಗೆ ಬಸ್ ಕಂಡಕ್ಟರ್ ಮಹಾದೇವ ಹುಕ್ಕೇರಿ ಎಂಬುವರ ಮೇಲೆ ಹಲ್ಲೆ ನಡೆಸಿರುವ ಮರಾಠಿಗರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿರುವ ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮತ್ತು ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಕೂಡಲೇ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸೋಮವಾರ ಕೊರ್ಲಕುಂಟೆ ಗ್ರಾಮದ ಕನ್ನಡ ಸಾಂಸ್ಕೃತಿಕ ಸಂಸ್ಥೆ ಪದಾಧಿಕಾರಿಗಳು ತಾಲೂಕು ಕಚೇರಿ ಸಿರಸ್ತೇದಾರ್ ಸದಾಶಿವಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸಂಸ್ಥೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಬೆಳಗಾವಿ ಗಡಿಯಲ್ಲಿ ಕನ್ನಡಿಗರ ಮೇಲೆ ಪದೇಪದೇ ಹಲ್ಲೆ, ದೌರ್ಜನ್ಯ ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ರದ್ದುಪಡಿಸಬೇಕು. ಕನ್ನಡದಲ್ಲಿ ಮಾತನಾಡಿರುವ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಮರಾಠಿ ಪುಂಡರನ್ನು ಕೂಡಲೇ ಬಂಧಿಸಬೇಕು. ದುರುದ್ದೇಶವಾಗಿ ಕಂಡಕ್ಟರ್ ಮೇಲೆ ಪೋಸ್ಕೋ ಕಾಯಿದೆ ದಾಖಲು ಮಾಡಿರುವುದು ರದ್ದುಪಡಿಸಬೇಕು. ಘಟನೆ ನಡೆದ ಮರುದಿನವೇ ಬೆಳಗಾವಿಯಲ್ಲಿ ಮರಾಠಿಗರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು.
ರಾಜಕಾರಣ ಅನುಕೂಲಕ್ಕಾಗಿ ಮರಾಠಿಗರ ಕೃತ್ಯ ವಿರುದ್ಧ ಮೌನ ವಹಿಸಿರುವ ಸತೀಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಮಹಾಜನ್ ವರದಿಯಂತೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳಗಾವಿ ಗಡಿ ಸಮಸ್ಯೆ ಬಗೆಹರಿಸುವ ತೀರ್ಮಾನ ಕೈಗೊಳ್ಳಬೇಕು. ನಾಡಿನ ನೆಲ, ಜಲ, ಭಾಷೆ ರಕ್ಷಣೆಗೆ ಜನಪ್ರತಿನಿಧಿಗಳು ಬದ್ದತೆ ಉಳಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಚುನಾವಣೆಯಲ್ಲಿ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ಡಿ. ಮಂಜುನಾಥ, ಮೈತ್ರಿ ದ್ಯಾಮಣ್ಣ, ಸಿ.ಜಿ. ತಿಪ್ಪೇಸ್ವಾಮಿ, ವಿಡುಪನಕುಂಟೆ ಮೂರ್ತಿ, ಎಚ್. ಲಂಕಪ್ಪ, ಎಲ್.ಟಿ. ತಿಪ್ಪೇಸ್ವಾಮಿ, ಎಂ.ಎಚ್. ಸ್ವಾಮಿ, ಆರ್. ರವಿವರ್ಮ, ವಿ. ಬೆಟ್ಟಪ್ಪ, ಎಂ. ಯತೀಶ್, ಪಗಡಲಬಂಡೆ ನಾಗೇಂದ್ರಪ್ಪ, ಎನ್. ಕುಶ, ಎನ್.ನರಸಿಂಹಮೂರ್ತಿ, ಪಿ.ಟಿ. ರಮೇಶ್, ಸಿ. ಸಿರಿಯಣ್ಣ, ಪಿ. ದೇವರಾಜ್, ಟಿ. ಕೊಲ್ಲಾರಿ ಮತ್ತಿತರರಿದ್ದರು.


