ನಿಮ್ಮ ಮನೆ ಮಗನಾಗಿ, ಆಳಾಗಿ ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ :  ಶಾಸಕ ಎಂ.ಚಂದ್ರಪ್ಪ

2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಜ.20): ಕಳೆದ ಬಾರಿ ಚುನಾವಣೆಯಲ್ಲಿ ಸೋತೆ ಎಂದು ಪಶ್ಚಾತಾಪ ಪಟ್ಟು 2018 ರಲ್ಲಿ ನಡೆದ ಚುನಾವಣೆಯಲ್ಲಿ ಒಂದು ಲಕ್ಷ ಎಂಟು ಸಾವಿರ ಮತಗಳನ್ನು ನೀಡಿ ನಲವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ನಿಮ್ಮ ಮನೆ ಮಗನಾಗಿ ಆಳಾಗಿ ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭರಮಸಾಗರ ಹೋಬಳಿ ಕೋಗುಂಡೆ ಗ್ರಾಮದಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ನೂತನ ಚೆಕ್‍ಡ್ಯಾಂ ಮತ್ತು ಬ್ರಿಡ್ಜ್ ನಿರ್ಮಾಣ ಕಾಮಗಾರಿ ಮತ್ತು ಐವತ್ತು ಲಕ್ಷ ರೂ.ವೆಚ್ಚದ ನೂತನ ಡಾಂಬರ್ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ಕಳೆದ 28 ವರ್ಷದಿಂದ ನಾನು ಶಾಸಕನಾಗಿದ್ದೇನೆ. ಈ ಗ್ರಾಮಕ್ಕೆ ಮೊದಲು ಬಂದಾಗ ಎಲ್ಲಿ ನೋಡಿದರೂ ಮಣ್ಣಿನ ರಸ್ತೆಯಿತ್ತು. ಲಕ್ಷ್ಮಿಸಾಗರ ಗೇಟ್‍ವರೆಗೂ ಟಾರ್ ರಸ್ತೆ ಮಾಡಿಸಿದ್ದೇನೆ. ಇಲ್ಲಿ ಒಂದು ಹಳ್ಳವಿತ್ತು. ಜನ ಓಡಾಡಲು ಕಷ್ಟವಾಗುತ್ತದೆಂದು ಸಣ್ಣ ಬ್ರಿಡ್ಜ್ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದೇನೆ. ಸಿಕ್ಕ ಅಧಿಕಾರವನ್ನು ಸಾರ್ವಜನಿಕರಿಗೆ ಧಾರೆ ಎರೆಯುವ ಮೂಲಕ ಯೋಗ್ಯತೆಯಿಟ್ಟುಕೊಂಡು ಕೆಲಸ ಮಾಡುವ ನಾನು ನಿಮ್ಮಗಳ ಮನೆ ಮಗನಾಗಿ ದುಡಿಯುತ್ತಿದ್ಧೇನೆಂದು ನೀವುಗಳು ಖುಷಿ ಪಟ್ಟರೆ ಇನ್ನು ಹೆಚ್ಚು ಅಭಿವೃದ್ದಿಗಳನ್ನು ಕೈಗೊಳ್ಳಲು ನನಗೆ ಹುರುಪು ಮೂಡುತ್ತದೆ ಎಂದರು.

ಎಲ್ಲಿಯೂ ಗಲಾಟೆ ಗದ್ದಲವಿಲ್ಲದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ಯಾವ ಜಾತಿಯವರನ್ನು ಪ್ರಶ್ನಿಸಿಲ್ಲ. ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಜೋಗ್‍ಫಾಲ್ಸ್ ನಿಂದ ಚಿಕ್ಕಜಾಜೂರು ಸಮೀಪ ನೇರವಾಗಿ ವಿದ್ಯುತ್ ತಂದು ಹೊಳಲ್ಕೆರೆ ತಾಲ್ಲೂಕಿನ ಎಲ್ಲಾ ಪವರ್ ಸ್ಟೇಷನ್‍ಗಳಿಗೆ ಪೂರೈಕೆ ಮಾಡಲಾಗುವುದು. ಇದರಿಂದ ಇನ್ನು ನೂರು ವರ್ಷಗಳ ಕಾಲ ರೈತರಿಗೆ ವಿದ್ಯುತ್ ಸಮಸ್ಯೆಯಾಗುವುದಿಲ್ಲ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಭರಮಸಾಗರ ಬಿಜೆಪಿ.ಮಂಡಲ ಅಧ್ಯಕ್ಷ ಶೈಲೇಶ್, ಎ.ಪಿ.ಎಂ.ಸಿ.ಅಧ್ಯಕ್ಷ ಕೋಗುಂಡೆ ಮಂಜುನಾಥ್, ವಿರೂಪಾಕ್ಷಪ್ಪ, ಈಶಣ್ಣ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ಶಿಲ್ಪಮ್ಮ, ಎಚ್.ಎಂ.ಬಸವರಾಜ್, ನಾಗರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಲ್ಲೇಶ್, ಹಿರೇಬೆನ್ನೂರು ರಾಜಣ್ಣ, ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *