ಮಂಗಳೂರು: ಧರ್ಮಸ್ಥಳದಲ್ಲಿ ಅಸ್ಥಿಪಂಜರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಬೆಳವಣಿಗೆ ನಡೆಯುತ್ತಿದೆ. ಅನಾಮಧೇಯ ವ್ಯಕ್ತಿ ಈಗ ಹೊಸದೊಂದು ಸ್ಥಳವನ್ನ ತೋರಿಸಿದ್ದು, ಆ ಸ್ಥಳದಲ್ಲೂ ಎಸ್ಐಟಿ ಅಧಿಕಾರಿಗಳು ಕಾರ್ಯ ಶುರು ಮಾಡಿದ್ದಾರೆ.
ಧರ್ಮಸ್ಥಳದ ಗೊಮ್ಮಟೇಶ್ವರ ಬೆಟ್ಟದಲ್ಲಿ ಹೊಸ ಜಾಗವನ್ನು ಗುರುತಿಸಿದ್ದಾರೆ. ಹೊಸದಾಗಿ ಗುರುತಿಸಿದ ಸ್ಥಳದಲ್ಲಿ ಇದೀಗ ಶೋಧಕಾರ್ಯಾಚರಣೆ ನಡೆಯುತ್ತಿದೆ. ದೂರುದಾರ ಎಸ್ಐಟಿ ಅಧಿಕಾರಿಗಳ ಜೊತೆಗೆ ನಿಂತಿದ್ದು, ಬಾಹುಬಲಿ ಬೆಟ್ಟದಲ್ಲಿ ಅಗೆಯುವ ಕೆಲಸ ಶುರುವಾಗಿದೆ. ಈಗ ಒಟ್ಟಾರೆ 14 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆದಿದೆ. ನಿನ್ನೆ ಕಲ್ಲೇರಿ ಸಮೀಪದ ಬೊಳಿಯಾರ್ ನಲ್ಲಿರುವ ದಟ್ಟಾರಣ್ಯದಲ್ಲಿ ಶೋಧ ಕಾರ್ಯ ನಡೆದಿದೆ. ಮೇಲ್ವಿಚಾರಕರ ಸೂಚನೆಯ ಮೇರೆಗೆ ಇಲ್ಲೊಬ್ಬ ಬಾಲಕಿಯ ಶವವನ್ನ ಹೂತಿದ್ದೆ ಎಂದು ಹೇಳಿದ್ದ. ಹೀಗಾಗಿ ಆ ಸ್ಥಳಕ್ಕೆ ಎಸ್ಐಟಿ ಅಧಿಕಾರಿಗಳು 6-7 ಅಡಿ ಗುಂಡಿಯನ್ನು ತೋಡಿದ್ದರು ಸಹ ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ.
ಇದೀಗ ಇಂದು ಬಾಹುಬಲಿ ಬೆಟ್ಟಕ್ಕೆ ಶಿಫ್ಟ್ ಆಗಿದ್ದಾರೆ. ಇದು ಹೊಸ ಜಾಗವಾಗಿದೆ. ಧರ್ಮಸ್ಥಳದ ದೇಗುಲದ ದ್ವಾರದ ಒಳ ಭಾಗಕ್ಕೆ ಹೋದಾಗ ಈ ಬೆಟ್ಟಕ್ಕೆ ದಾರಿ ಸಿಗುತ್ತದೆ. ಈಗಾಗಲೇ ಶೋಧ ಕಾರ್ಯ ಶುರುವಾಗಿದ್ದು, ಇಷ್ಟು ಶೋಧ ಕಾರ್ಯ ನಡೆದರು ಕೂಡ ಒಂದೇ ಕಡೆ ಮಾತ್ರ ಅಸ್ಥಿಪಂಜರದ ಕುರುಹು ಸಿಕ್ಕಿದೆ. ಅರಣ್ಯದ ಒಳ ಭಾಗಕ್ಕೆ ಕರೆದುಕೊಂಡು ಹೋದಾಗ ಅರಣ್ಯದ ಒಳಗೆ ಒಂದಷ್ಟು ಅಸ್ಥಿಪಂಜರದ ವಸ್ತುಗಳು ಕಂಡು ಬಂದಿವೆ.
ಗೊಮ್ಮಟೇಶ್ವರ ಬೆಟ್ಟದಲ್ಲಿ ಒಬ್ಬ ಮಹಿಳೆಯ ಶವವನ್ನ ಹೂತು ಹಾಕಿದ್ದೇನೆ ಎಂದು ಹೇಳಿದ್ದ ಕಾರಣ ಈಗ ಅಗೆಯುವುದಕ್ಕೆ ಶುರು ಮಾಡಿದ್ದಾರೆ. ಆ ಸ್ಥಳದಲ್ಲಿ ತಹಶಿಲ್ದಾರ್, ಎಸ್ಐಟಿ ಅಧಿಕಾರಿಗಳು, ಎಫ್ಎಸ್ಎಲ್ ಅಧಿಕಾರಿಗಳು ಕೂಡ ಅಲ್ಲಿಯೇ ಇದ್ದಾರೆ.






