ಅರಣ್ಯ ವ್ಯಾಪ್ತಿಯನ್ನು ಶೇಕಡ 33ಕ್ಕೆ ಹೆಚ್ಚಿಸಲು ಸರ್ವ ಪ್ರಯತ್ನ ಸಚಿವ ಈಶ್ವರ ಖಂಡ್ರೆ

1 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, (ಜೂ.16) : ಪ್ರಸ್ತುತ ರಾಜ್ಯದಲ್ಲಿ ಶೇಕಡ 21ರಷ್ಟು ಅರಣ್ಯ ವ್ಯಾಪ್ತಿ ಇದ್ದು ಇದನ್ನು ಶೇ.33ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಶ್ರಮಿಸಲಿದೆ ಎಂದು ಅರಣ್ಯ ವನ್ಯಜೀವಿ ಮತ್ತು ಪರಿಸರಕ್ಕಾಗಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಚಿತ್ರದುರ್ಗದ ಭೋವಿಮಠದಲ್ಲಿ ಇಂದು ಇಮ್ಮಡಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಅವರ ದರ್ಶನ ಪಡೆದು ಆಶ್ರಮದ ಆವರಣದಲ್ಲಿ ಅರಳಿ ಮತ್ತು ಬೇವಿನ ಸಸಿಗಳನ್ನು ನೆಟ್ಟ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಸರ್ಕಾರ ಅರಣ್ಯ ಕಾಯ್ದೆ ವನ್ಯಜೀವಿ ಕಾಯ್ದೆ ಸೇರಿದಂತೆ ಎಲ್ಲ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಿದೆ ಎಂದರು.

ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ಎರಡೂ ಇಂದಿನ ಅಗತ್ಯವಾಗಿದ್ದು ಸರ್ಕಾರ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲಿದೆ ಎಂದು ಹೇಳಿದರು. ಅರಣ್ಯ ಒತ್ತುವರಿ ಸಮಸ್ಯೆಗೆ ಜಂಟಿ ಸಮೀಕ್ಷೆ ಪರಿಹಾರವಾಗಿದ್ದು ಕಾಲಮಿತಿ ಒಳಗೆ ಜಂಟಿ ಸಮೀಕ್ಷೆ ನಡೆಸಲು ಕಂದಾಯ ಇಲಾಖೆಯ ಸಹಯೋಗದಲ್ಲಿ ಕಾರ್ಯ ನಿರ್ವಹಿಸುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.

ಅರಣ್ಯದಲ್ಲಿ ಮತ್ತು ಪರಿಭಾವಿತ ಅರಣ್ಯ ಪ್ರದೇಶಗಳಲ್ಲಿ ಕೆಲವರು ಒತ್ತುವರಿ ಮಾಡಿರುವ ಕುರಿತಂತೆ ದೂರುಗಳಿದ್ದು ಕಾನೂನು ರೀತ್ಯ ಕ್ರಮ ಜರುಗಿಸಲಾಗಿದೆ. ಆದರೆ ಚಿಕ್ಕ ಗುಡಿಸಿಲುಗಳನ್ನು ಕಟ್ಟಿಕೊಂಡು ಅಥವಾ ತುಂಡು ಭೂಮಿಯಲ್ಲಿ ಕೃಷಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುವ ವಿಚಾರದಲ್ಲಿ ಮಾನವೀಯತೆಯ ನೆಲೆಘಟ್ಟಿನಲ್ಲಿ ಕಾರ್ಯ ಮಾಡುವುದು ಅನಿವಾರ್ಯ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *