ಚಂದ್ರಯಾನ 3ರ ಯಶಸ್ಸಿನ ನಂತರ ಅಮೇರಿಕಾ ಭಾರತದ ತಂತ್ರಜ್ಞಾನವನ್ನು ಕೇಳಿದೆ : ಇಸ್ರೋ ಅಧ್ಯಕ್ಷ ಸೋಮನಾಥ್

 

ಸುದ್ದಿಒನ್ : Chandrayan 3: ಚಂದ್ರಯಾನ 3ರ ಯಶಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದಿದೆ ಎಂಬುದರಲ್ಲಿ ಸಂದೇಹವಿಲ್ಲ.
ಜಗತ್ತಿನ ಯಾವ ದೇಶಕ್ಕೂ ಸಾಧ್ಯವಾಗದಂತಹ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಡುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನೇ ಬರೆದಿದೆ.

ಚಂದ್ರಯಾನ 3 ರ ಯಶಸ್ಸಿನೊಂದಿಗೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ತಂತ್ರಜ್ಞಾನವು ಮತ್ತೊಂದು ಹಂತಕ್ಕೆ ತಲುಪಿದೆ. ಈ ಹಿನ್ನಲೆಯಲ್ಲಿ ಆ ತಂತ್ರಜ್ಞಾನವನ್ನು ಪಡೆಯಲು ಅಮೆರಿಕವೂ ಮುಂದಾಗಿರುವಂತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೋ ಮುಖ್ಯಸ್ಥರು ಪ್ರಮುಖ ಹೇಳಿಕೆಯನ್ನು ನೀಡಿದ್ದಾರೆ.

ಚಂದ್ರಯಾನ 3 ರ ಉಡಾವಣೆಗೆ ಸಂಬಂಧಿಸಿದ ಅಭಿವೃದ್ಧಿ ಚಟುವಟಿಕೆಗಳನ್ನು ಪರಿಶೀಲಿಸಿದ ಅಮೆರಿಕಾದ ಬಾಹ್ಯಾಕಾಶ ತಜ್ಞರು ಚಂದ್ರಯಾನ 3 ರ ಉಡಾವಣೆಗೂ ಮೊದಲೇ ಆ ತಂತ್ರಜ್ಞಾನವನ್ನು ಹಂಚಿಕೊಳ್ಳಲು ವಿನಂತಿಸಿದ್ದರು ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಸ್ಪಷ್ಟಪಡಿಸಿದ್ದಾರೆ.

ಈಗ ಕಾಲ ಬದಲಾಗಿದೆ. ಭಾರತವೂ ಅತ್ಯುತ್ತಮ ಉಪಕರಣಗಳು ಮತ್ತು ರಾಕೆಟ್‌ಗಳನ್ನು ತಯಾರಿಸಬಲ್ಲದು.  ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯಕ್ಕೆ ಅವಕಾಶ ನೀಡಿದ್ದಾರೆ ಎಂದು ಸೋಮನಾಥ್ ಹೇಳಿದರು.

ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆ ಅಂಗವಾಗಿ ತಮಿಳುನಾಡಿನ ಚೆನ್ನೈನಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಸೋಮನಾಥ್ ಮಾತನಾಡಿದರು. ಈ ಸಂದರ್ಭದಲ್ಲಿ ಚಂದ್ರಯಾನ 3ರ ಯಶಸ್ಸು ನಂತರದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿ ಈ ವಿಷಯವನ್ನು ತಿಳಿಸಿದರು.

ಚಂದ್ರಯಾನ 3 ಬಾಹ್ಯಾಕಾಶ ನೌಕೆಯನ್ನು ತಯಾರಿಸಿದ ನಂತರ ಇಸ್ರೋ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಿಂದ ತಜ್ಞರನ್ನು ಆಹ್ವಾನಿಸಿಲಾಗಿತ್ತ ಎಂದು ಸೋಮನಾಥ್ ಹೇಳಿದರು.

ಚಂದ್ರಯಾನ 3 ಉಡಾವಣೆ ಕುರಿತು ನಾಸಾ ತಜ್ಞರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು. ಚಂದ್ರಯಾನ 3 ಉಡಾವಣೆಯನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ, ಇಸ್ರೋ ಎಂಜಿನಿಯರ್‌ಗಳು ಹೇಗೆ ಶ್ರಮಿಸಿದ್ದಾರೆ, ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡಿಂಗ್ ಹೇಗೆ ಮಾಡಲಿದ್ದಾರೆ ಎಂಬುದು ಸೇರಿದಂತೆ ವಿವಿಧ ವಿಷಯಗಳನ್ನು ಹೇಳಲಾಯಿತು ಎಂದು ಅವರು ಹೇಳಿದರು.

ಇಸ್ರೋ ತಯಾರಿಸಿರುವ ತಾಂತ್ರಿಕ ಸಾಧನಗಳನ್ನು ಪರಿಶೀಲಿಸಿದ ನಾಸಾ ತಜ್ಞರು, ಇವುಗಳು ಅತ್ಯಂತ ಕಡಿಮೆ ವೆಚ್ಚ, ನಿರ್ಮಾಣ ಮಾಡಲು ಸುಲಭ ಮತ್ತು ಸುಧಾರಿತ ತಂತ್ರಜ್ಞಾನದಿಂದ ಕೂಡಿವೆ ಎಂದು ಹೇಳಿದ್ದಾರೆ. ಆ ಸಾಧನಗಳನ್ನು ಹೇಗೆ ತಯಾರಿಸಲಾಯಿತು, ಅದಕ್ಕೆ ಬಳಸಿದ ತಂತ್ರಜ್ಞಾನ ಏನು, ಈ ತಂತ್ರಜ್ಞಾನವನ್ನು ಅಮೆರಿಕದೊಂದಿಗೆ ಏಕೆ ಹಂಚಿಕೊಳ್ಳಬಾರದು ಎಂದು ನಾಸಾ ವಿಜ್ಞಾನಿಗಳು ಕೇಳಿದರು ಎಂದು ಸೋಮನಾಥ್ ನೆನಪಿಸಿಕೊಂಡರು.

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತವನ್ನು ಹೆಚ್ಚು ಶಕ್ತಿಶಾಲಿಯಾಗಿಸಲು ಜನರನ್ನು ಆಹ್ವಾನಿಸಲಾಗಿದೆ ಎಂದು ಸೋಮನಾಥ್ ಹೇಳಿದರು. ರಾಕೆಟ್ ಮತ್ತು ಉಪಗ್ರಹಗಳ ತಯಾರಿಕೆಗೆ ಮುಂದೆ ಬರುವಂತೆ ತಿಳಿಸಿದರು. ಚೆನ್ನೈನ ಅಗ್ನಿಕುಲ್ ಮತ್ತು ಹೈದರಾಬಾದ್‌ನ ಸ್ಕೈರೂಟ್ ರಾಕೆಟ್‌ಗಳನ್ನು ತಯಾರಿಸುತ್ತಿವೆ ಎಂದು ಸೋಮನಾಥ್ ಹೇಳಿದರು. ಇದರಂತೆ 5 ಕಂಪನಿಗಳು ದೇಶದಲ್ಲಿ ರಾಕೆಟ್ ಮತ್ತು ಉಪಗ್ರಹಗಳನ್ನು ತಯಾರಿಸುತ್ತಿವೆ. ಚಂದ್ರಯಾನ 3 ರ ಯಶಸ್ಸಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರನ ಮೇಲೆ ಭಾರತೀಯರನ್ನು ಯಾವಾಗ ಕಳುಹಿಸುತ್ತೀರಿ ಎಂದು ಕೇಳಿದರು. ಆ ರಾಕೆಟ್ ತಯಾರಿಸುತ್ತೇವೆ ಎಂದು ಸೋಮನಾಥ್ ವಿದ್ಯಾರ್ಥಿಗಳಿಗೆ ಹೇಳಿದರು. ಚಂದ್ರಯಾನ 10 ಉಡಾವಣೆ ವೇಳೆ ಇಲ್ಲಿನ ಒಬ್ಬರು ರಾಕೆಟ್‌ನಲ್ಲಿ ಚಂದ್ರನತ್ತ ಹೋಗಲಿದ್ದಾರೆ ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳಾ ಗಗನಯಾತ್ರಿಗಳು ಇರಬಹುದೇನೋ ಎಂದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks