ತಿರುಮಲಾಪುರದಲ್ಲಿ ಗಜಾನನ ಗೆಳೆಯರ ಬಳಗದಿಂದ ಸಾಂಸ್ಕೃತಿಕ ಸಂಭ್ರಮ

2 Min Read

ಸುದ್ದಿಒನ್, ಹೊಳಲ್ಕೆರೆ : ವಿದ್ಯಾರ್ಥಿಗಳು ಉನ್ನತ ವ್ಯಕ್ತಿಯಾಗುವ ಕನಸುಗಳನ್ನು ಇಟ್ಟುಕೊಂಡು ಕಾರ್ಯತತ್ಪರರಾಗಬೇಕು. ಕನಸುಗಳೆ ಭವಿಷ್ಯದ ಭರವಸೆಗಳು ಮತ್ತು ನಮ್ಮನ್ನು ಭವಿಷ್ಯದಲ್ಲಿ ಬೆಳೆಸುವ ಊರುಗೋಲುಗಳು ಎಂದು ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಗಗನ್ ಯಾದವ ಅಭಿಪ್ರಾಯ ವ್ಯಕ್ತಪಡಿಸಿದರು.

ಎಮ್ಮೆಹಟ್ಟಿ ತಿರುಮಲಾಪುರದಲ್ಲಿ ಗಜಾನನ ಯುವಕರ ಸಂಘದ ವತಿಯಿಂದ ಗಣೇಶ ಪ್ರತಿಷ್ಠಾಪನೆ ಪ್ರಯುಕ್ತ ಸಾರ್ವಜನಿಕರಿಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಅಧಿಕಾರಿಗಳಾಗುವ, ರಾಜಕಾರಣಿಗಳಾಗುವ, ಸಮಾಜ ಸೇವಕರಾಗುವ ಕಡೆ ಹೆಚ್ಚಿನ ಗಮನ ಹರಿಸಬೇಕು. ತಮ್ಮ ಕುಟುಂಬ ಹಾಗು ಗ್ರಾಮದ ಅಭಿವೃದ್ಧಿಗೆ ಯುವಕರು ಶ್ರಮಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶರವರು ಮಾತನಾಡಿ, ಮೇಲು ಕೀಳು ಜಾತಿ ಮತ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಧರ್ಮಕ್ಕಿದೆ. ಧರ್ಮವೆಂದರೆ ಒಳಿತಿನ ಆಚರಣೆ. ಗಣೇಶ ಚತುರ್ಥಿಯ ಉತ್ಸವದಲ್ಲಿ ಗ್ರಾಮದವರು, ನೆರೆಹೊರೆ ಊರವರು ಯಾವುದೇ ಭೇದಭಾವವಿಲ್ಲದೆ ಕಲೆತು ದೇವರ ಕಾರ್ಯ ನೆರವೇರಿಸುವ ಜೊತೆಗೆ ಅನೇಕ ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ ಚಿಂತನ ಮಂಥನ ಗೋಷ್ಠಿಗಳ ನಡೆಸುತ್ತಿರುವುದು ಉತ್ತಮ ಕಾರ್ಯವಾಗಿದೆ. ದೇಶದ ಅಸ್ತಿತ್ವ ಧರ್ಮದ ರಕ್ಷಣೆಯ ಮೇಲೆ ನಿಂತಿದೆ. ನಮ್ಮ ಅಭಿವೃದ್ಧಿಯಲ್ಲಿ ಧರ್ಮ ಮತ್ತು ದೇಶದ ಅಭಿವೃದ್ಧಿಯು ಇದೆ. ಪುರಾತನ ಕಾಲದಿಂದಲು ಧರ್ಮಕ್ಕೆ ಚ್ಯುತಿ ಬಂದಾಗಲೆಲ್ಲ ಪುನರುತ್ಥಾನ ಮಾಡಲು ಮಹನೀಯರು ಜನಿಸಿದ್ದಾರೆ. ನಮ್ಮ ಸಂಸ್ಕೃತಿ ಸಂಸ್ಕಾರಗಳಿಂದ ಮನೆ ಮನೆತನಕ್ಕೆ ಕೀರ್ತಿ ತಂದು ನಾಡಿನ ಪ್ರಗತಿಗೆ ಕಾರಣಕರ್ತರಾಗೋಣ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಹೊಳಲ್ಕೆರೆ ಅಧ್ಯಕ್ಷರಾದ ಎನ್.ಶಿವಮೂರ್ತಿಯವರು, ಪರಸ್ಪರ ಸಹಕಾರ ಮನೋಭಾವದಿಂದ ಧಾರ್ಮಿಕ ಉತ್ಸವಗಳು ನಡೆಯುತ್ತಿವೆ. ಅದರಂತೆ ಗ್ರಾಮದ ಸ್ವಚ್ಛತೆ ಶೈಕ್ಷಣಿಕ ಪ್ರಗತಿಗೆ ಎಲ್ಲರು ಶ್ರಮಿಸಬೇಕು. ಗ್ರಾಮದ ವೆಂಕಟೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಬೇಕು. ಎಲ್ಲರು ಒಂದೆಂಬ ಭಾವನೆಯೇ ನಮ್ಮನ್ನು ಯೋಗ್ಯ ನಾಗರೀಕರಾಗಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಗಗನ್ ಯಾದವ್, ಯುವ ಕಾಂಗ್ರೆಸ್ ಚಿತ್ರದುರ್ಗ ಜಿಲ್ಲಾ ಉಪಾಧ್ಯಕ್ಷರಾದ ಕಿರಣ ಯಾದವ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕಸಾಪ ಹೊಳಲ್ಕೆರೆ ಅಧ್ಯಕ್ಷರಾದ ಎನ್.ಶಿವಮೂರ್ತಿ, ಯಾದವ ಮಹಾಸೇನೆ ಅಧ್ಯಕ್ಷರಾದ ಅಣ್ಣಪ್ಪ, ಚಿತ್ರದುರ್ಗ ಜಿಲ್ಕಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಜಗದೀಶ್, ಗ್ರಾಮ ಪಂಚಾಯಿತಿ ಸದಸ್ಯರುಗಳು, ಶಾಲಾ ಸಮಿತಿ ಮಾಜಿ ಅಧ್ಯಕ್ಷರಾದ ವೀರನಾಗಪ್ಪ, ಗಜಾನನ ಗೆಳೆಯರ ಬಳಗದ ಸದಸ್ಯರು ಹಾಜರಿದ್ದರು. ಕಾರ್ಯಕ್ರಮವನ್ನು ಧನಂಜಯ್ ಉಪನ್ಯಾಸಕರು ನಿರ್ವಹಿಸಿದರು. ರಾತ್ರಿಯಿಡಿ ಗ್ರಾಮಸ್ಥರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗೀತಾಂಜಲಿ ಮೆಲೋಡೀಸ್ ತರೀಕೆರೆಯವರು ಮತ್ತು ಶಾಲಾ ವಿದ್ಯಾರ್ಥಿಗಳು ಮನರಂಜನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks