ಮಂಗಳೂರು: ಪುತ್ತೂರು ತಾಲೂಕಿನ ಕ್ರೀಡಾಂಗಣದಲ್ಲಿ ನಿನ್ನೆ ಅಶೋಕ ಜನಮನ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದರು. ಆದ್ರೆ ನೂಕು ನುಗ್ಗಲು ಉಂಟಾದ ಕಾರಣ ಉಸಿರಾಡುವುದಕ್ಕೂ ಕಷ್ಟವಾಗಿ 13 ಜನ ಅಸ್ವಸ್ಥಗೊಂಡಿದ್ದರು. ಆ ರೀತಿ ಆಗೋದಕ್ಕೆ ಕಾರಣವೇನು ಎಂಬುದನ್ನ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಆಹಾರ ಮತ್ತು ಉಡುಗೊರೆಯನ್ನು ನೀಡಲಾಗಿತ್ತು. ಆದರೆ ಅದನ್ನು ಹಂಚುವುದರಲ್ಲಿ ತೀರಾ ತಡ ಮಾಡಿದರು. ಹೀಗಾಗಿ ಅಲ್ಲಿ ನೆರೆದಿದ್ದ ಕೆಲವು ಹೆಣ್ಣು ಮಕ್ಕಳಿವೆ ನಿರ್ಜಲೀಕರಣದಿಂದಾಗಿ ಅಸ್ವಸ್ಥಗೊಂಡರು. ಆ ಪೈಕಿ ಕೆಲವರಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಯ್ತು. ಇನ್ನು ಕೆಲವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಎಲ್ಲರೂ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಯಲ್ಲಿ ಯಾರಿಗೂ ತೀವ್ರವಾದಂತ ತೊಂದರೆ ಆಗಿಲ್ಲ. ಸದ್ಯ ಎಲ್ಲರೂ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ದೀಪಾವಳಿ ಹಬ್ಬ ಬೇರೆ. ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರು. ಆದರೆ ಈಗ ಅಸ್ವಸ್ಥಗೊಂಡ ಮಹಿಳೆಯರ ಮನೆಯಲ್ಲಿ ಸುಧಾರಿಸಿಕೊಂಡರೆ ಸಾಕು ಎಂಬಂತಾಗಿದೆ. ಹಬ್ಬಕ್ಕಾಗಿ ಬಟ್ಟೆ, ಆಹಾರ ತೆಗೆದುಕೊಳ್ಳಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೃಷ್ಟವಶಾತ್ ಯಾವುದೇ ರೀತಿಯ ದೊಡ್ಡ ತೊಂದರೆಯಾಗಿಲ್ಲ ಎಂಬುದೇ ಸ್ಥಳೀಯರ ಸಮಾಧಾನ. ಆದರೆ ಅಶೋಕ್ ರೈ ಟ್ರಸ್ಟ್ ನಿಂದ ಈ ಕಾರ್ಯಕ್ರಮಕ್ಕೆ ಸರಿಯಾದ ವ್ಯವಸ್ಥೆ ಮಾಡಿಲ್ಲವೆಂದು ಪೊಲೀಸ್ ಇಲಾಖೆ ಕೂಡ ಗರಂ ಆಗಿದೆ. ಯಾಕಂದ್ರೆ ಮೊದಲೇ ಪತ್ರ ಬರೆದು ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ, ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿತ್ತು.






