ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 07 : ಕರ್ನಾಟಕದಲ್ಲಿರುವ ಸಮೃದ್ದ ಕಾಡುಗಳು, ನೈಸರ್ಗಿಕ ಸಂಪತ್ತು, ನದಿಗಳು ಮತ್ತು ವೈವಿಧ್ಯಮಯ ಜೀವ ಜಾಲವನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಸಮಿತಿ ಅಧ್ಯಕ್ಷ ಮಾಲತೇಶ್ ಅರಸ್ ತಿಳಿಸಿದರು.
ಕರ್ನಾಟಕ ಅರಣ್ಯ ಇಲಾಖೆ ಪ್ರಾದೇಶಿಕ ವಲಯ ಚಿತ್ರದುರ್ಗದಿಂದ ಜೋಗಿಮಟ್ಟ ವನ್ಯಧಾಮದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ವನ್ಯಜೀವಿ ಸಪ್ತಾಹ ಹಾಗೂ ಪರಿಸರ ಜಾಗೃತಿ ಅಭಿಯಾನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ವನ್ಯಜೀವಿ ಸಪ್ತಾಹ ನಮಗೆ ಜಾಗೃತಿಯನ್ನು ಮೂಡಿಸುತ್ತದೆ. ಮುಂದಿನ ಪೀಳಿಗೆಗೆ ಪರಿಸರ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಬೇಕು. ವನ್ಯಜೀವಿ ಸಪ್ತಾಹ ಕೇವಲ ಒಂದು ವಾರದ ಆಚರಣೆಯಾಗಬಾರದು. ಜೀವನ ಶೈಲಿಯಾಗಿರಬೇಕು. ಕಾಡಿನ ಜೀವಿಗಳ ಸೌಂದರ್ಯ ಅವುಗಳ ಮಹತ್ವ ಪರಿಸರ ಸಂರಕ್ಷಣೆಯ ಅಗತ್ಯತೆ ಮತ್ತು ಪರಿಸರ ಸ್ನೇಹಿ ಬದುಕಿನ ಪ್ರೇರಣೆ. ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸಬೇಕೆಂದು ಹೇಳಿದರು.
ಪ್ರತಿ ವರ್ಷ ಅಕ್ಟೋಬರ್ ಮೊದಲ ವಾರದಂದು ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗುತ್ತದೆ. ಇದು ಕೇವಲ ಸಾಂಪ್ರದಾಯಿಕ ಹಬ್ಬವಲ್ಲ. ನಮ್ಮ ಸುತ್ತಲೂ ಇರುವ ವನ್ಯ ಜೀವಿಗಳ ಮಹತ್ವ ಸಾರುವ ಜಾಗೃತಿ ಅಭಿಯಾನ. ವನ್ಯಜೀವಿ ಸಪ್ತಾಹದ ಮುಖ್ಯ ಉದ್ದೇಶವೆಂದರೆ ವನ್ಯ ಜೀವಿ ಜಾಗೃತಿ, ಜನರಲ್ಲಿ ಕಾಡಿನ ಜೀವಿ, ಪಕ್ಷಿಗಳ ಜೀವಸಸ್ಯಗಳ ಕುರಿತು ಅರಿವು ಮೂಡಿಸುವುದು, ಪರಿಸರ ಸಮತೋಲನ, ವನ್ಯಜೀವಿಗಳನ್ನು ಉಳಿಸಲು ಪ್ರೇರೇಪಿಸುವುದು, ಪ್ಲಾಸ್ಟಿಕ್ ಬಳಕೆ ದೂರ ಮಾಡುವುದು ನಮ್ಮ ಉದ್ದೇಶ ಎಂದರು.
ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ರಾಮದಾಸ್ ಚವ್ಹಾಣ್ ಮಾತನಾಡಿ ಜೋಗಿಮಟ್ಟಿ ನಿಮ್ಮ ಆಸ್ತಿ. ಅರಣ್ಯ ಸಂರಕ್ಷಿಸಿದರೆ ವನ್ಯ ಜೀವಿ ಉಳಿಯುತ್ತದೆ. ಶಾಲೆ ಕಾಲೇಜುಗಳಲ್ಲಿ ವನ್ಯಜೀವಿ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕಾಗಿರುವುದರಿಂದ ಸಾರ್ವಜನಿಕರ ಪಾತ್ರ ಅತ್ಯವಶ್ಯಕ ಎಂದು ನುಡಿದರು.
ಪರಿಸರ ಪ್ರೇಮಿ ಹರೀಶ್ ಮಾತನಾಡಿದರು. ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ದಾದಾಪೀರ್, ರಶ್ಮಿ, ಬೀಟ್ ಫಾರೆಸ್ಟರ್ ಸಂತೋಷ್ಕುಮಾರ್, ಮೇಘನಾ ಹೆಚ್.ಟಿ. ಪ್ರಭುಶಂಕರ್, ಚಾಂದ್ ಫಲ್ಟನ್, ಅರಣ್ಯ ಕ್ಷೇಮಾಭಿವೃದ್ದಿ ನೌಕರರ ಸಂಘದ ಅಧ್ಯಕ್ಷ ಕಣುಮಪ್ಪ, ಅರಣ್ಯ ವೀಕ್ಷಕ ಕನಕಪ್ಪ ಹಾಗೂ ಅರಣ್ಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






