ಬೆಂಗಳೂರು: ಸದ್ಯ ಎಲ್ಲೆಲ್ಲೂ ಕಾಂತಾರ ಫೀವರ್ ಮನೆ ಮಾಡಿದೆ. ರಾಜ್ಯ ಮಾತ್ರವಲ್ಲ ದೇಶದಾದ್ಯಂತ ರಿಷಬ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರ ನಟನೆಗೆ ಶಬ್ಬಾಸ್ ಎಂದಿದ್ದಾರೆ. ಹಾಎಇ ಕೊಂಡಾಡುತ್ತಿದ್ದಾರೆ. ಆದರೆ ಇದರ ನಡುವೆ ತುಳುಕೂಟದವರು ರಿಷಬ್ ಶೆಟ್ಟಿಗೆ ಪತ್ರವೊಂದನ್ನ ಬರೆದಿದ್ದಾರೆ. ಜನ ಎಲ್ಲೆಂದರಲ್ಲಿ ದೈವದ ಆರಾಧನೆಯನ್ನ ಅನುಕರಣೆ ಮಾಡುತ್ತಿರುವುದಕ್ಕೆ ತುಳುಕೂಟ ಬೇಸರ ವ್ಯಕ್ತಪಡಿಸಿದೆ.
ರಿಷಬ್ ಶೆಟ್ಟಿ ಅವರೇ ನೀವೂ ದೈವಗಳಲ್ಲಿ ಅಪಾರವಾದ ನಂಬಿಕೆ ಇರುವವರು ಎಂದು ಹಲವು ಬಾರಿ ಹೇಳಿಕೊಂಡಿದ್ದೀರಿ. ನೀವೂ ದೈವದ ಬಗ್ಗೆ ಸಿನಿಮಾ ಮಾಡಿದ್ದೀರಿ. ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ನಿಮ್ಮ ಸಿನಿಮಾ ನೋಡುವ ಅಭಿಮಾನಿಗಳಿಗೆ ದೈವದ ಬಗ್ಗೆ ಜಾಗೃತಿ ಮೂಡಿಸಿ. ಕಾಂತಾರ ಬಂದಾಗಿನಿಂದಲೂ ದೈವದ ಅನುಕರಣೆ ಹೆಚ್ಚಾಗುತ್ತಿದೆ. ವ್ಯಕ್ತಿಯೊಬ್ಬ ದೈವದ ವೇಷ ಧರಿಸಿ, ಚಿತ್ರಮಂದಿರಕ್ಕೆ ಬಂದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಸಿನಿಮಾ ನೋಡುವಾಗಲರೆ ಕೆಲ ಪ್ರೇಕ್ಷಕರು ದೈವ ಬಂದವರಂತೆ ವರ್ತಿಸುತ್ತಾ ಇದ್ದಾರೆ. ದಿನಬೆಳಗಾದರೆ ಇಂಥಹ ವಿಡಿಯೋಗಳನ್ನು ನೋಡಿ ನಾವೂ ರೋಸಿ ಹೋಗಿದ್ದೇವೆ. ಇವೆಲ್ಲವನ್ನೂ ನೋಡಿ ನೀವೇಕೆ ಮೌನವಾಗಿದ್ದೀರಿ ಎಂಬುದು ತಿಳಿಯುತ್ತಿಲ್ಲ.
ಸಿನಿಮಾ ಪ್ರದರ್ಶನಕ್ಕೆ ಮುಂಚೆ ಈ ಬಗ್ಗೆ ಒಂದು ಡಿಸ್ಕ್ಲೈಮರ್ ಹಾಕಿ ಎಂದು ಈ ಹಿಂದೆಯೇ ಮನವಿ ಮಾಡಿದೆವು. ಆದರೆ ಈ ಬಗ್ಗೆ ನಿಮಗೆ ಯಾಕೆ ಅಷ್ಟೊಂದು ನಿರ್ಲಕ್ಷ್ಯವೋ ತಿಳಿಯುತ್ತಿಲ್ಲ. ದೈವಾರಾಧನೆ ನಮ್ಮ ನಂಬಿಕೆ. ಕೂಡಲೇ ಸುದ್ದಿಗೋಷ್ಟಿ ಕರೆದು ಈ ಬಗ್ಗೆ ಜಾಗೃತಿ ಮೂಡಿಸಿ ಎಂದು ಪತ್ರ ಬರೆದಿದ್ದಾರೆ. ಈ ಹಿಂದೆ ಕಾಂತಾರ ಸಿನಿಮಾ ರಿಲೀಸ್ ಆದಾಗಲೂ ಕ್ಲೈಮ್ಯಾಕ್ಸ್ ಸೀನ್ ನಲ್ಲಿ ದೈವ ಕೂಗಿದಂತೆ ಎಲ್ಲರೂ ಕೂಗುತ್ತಿದ್ದರು. ಆಗ ರಿಷಬ್ ಅವರು ಆ ರೀತಿ ಕೂಗಬೇಡಿ ಎಂದು ಮನವಿ ಮಾಡಿದ್ದರು.

