ಮಂತ್ರಾಲಯ: ನಾಡಿನೆಲ್ಲೆಡೆ ಇಂದು ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಒಂದಷ್ಟು ಬೆಳಗ್ಗಿನ ಮುಹೂರ್ತದಲ್ಲಿಯೇ ಗಣಪತಿ ಮೂರ್ತಿಯನ್ನ ಕೂರಿಸಿ ಪೂಜೆ ಸಲ್ಲಿಸಿದ್ದಾರೆ. ಇನ್ನು ಕೆಲವರು ಸಂಜೆಯ ಮುಹೂರ್ತದಲ್ಲಿ ಪೂಜೆ ನೆರವೇರಿಸಲಿದ್ದಾರೆ. ಎಲ್ಲಾ ಊರುಗಳಲ್ಲೂ ಇಂದಿನಿಂದ ಮೂರು ಅಥವಾ ಐದು ದಿನ ಗಣೇಶನದ್ದೇ ದರ್ಬಾರು. ಈ ಸಂಭ್ರಮ ಮಂತ್ರಾಲಯದಲ್ಲಿಯೂ ಮನೆ ಮಾಡಿದೆ.
ಮಂತ್ರಾಲಯದ ಓಲ್ಡ್ ಟೌಬ್ ಆಂಜನೇಯ ದೇವಸ್ಥಾನದಲ್ಲಿ ನೂರಾರು ಮಣ್ಣಿನ ಗಣಪತಿಗಳನ್ನ ಪೂಜೆ ಮಾಡಿ, ಭಕ್ತರಿಗೆ ನೀಡುತ್ತಿದ್ದಾರೆ. ರಾಯರ ಮಠದ ಪೀಠಾಧಿಪತಿಗಳಾದ ಸುಬುದೇಂದ್ರ ಶ್ರೀಗಳು ಗಣಪತಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಬಳಿಕ ಭಕ್ತರಿಗೆ ನೀಡುತ್ತಿದ್ದಾರೆ. ಮಠದಲ್ಲಿ ಮೊದಲೇ ಹೆಸರು ನೋಂದಾಯಿಸಿದ ಭಕ್ತರು ಈ ಮೂರ್ತಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ತಮ್ಮ ಮನೆಯಲ್ಲಿ ಪೂಜೆ ಮಾಡಿ, ಆ ನಂತರ ನೀರಿನಲ್ಲಿ ಬಿಡುತ್ತಾರೆ. ಅದರಲ್ಲೂ ಸುಬುದೇಂದ್ರ ಶ್ರೀಗಳಿಂದ ಬಂದ ಗಣಪತಿಯಾಗಿರುವ ಕಾರಣಕ್ಕೆ ಇನ್ನಷ್ಟು ಸಂತಸ ಭಕ್ತರಲ್ಲಿದೆ.
ಮಣ್ಣಿನ ಗಣಪತಿಯನ್ನೇ ಪೂಜೆ ಮಾಡಿ ಎಂದು ಎಲ್ಲರು ಸಲಹೆಯನ್ನ ನೀಡುತ್ತಾರೆ. ಯಾಕಂದ್ರೆ ನೀರಿಗೆ ಬಿಟ್ಟಾಗ ಕೆರೆಯ ನೀರು ಹಾಳಾಗಬಾರದು, ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗಬಾರದು ಎಂಬುದಕ್ಕೆ ಸಾಕಷ್ಟು ಜಾಗೃತಿ ಮೂಡಿಸುತ್ತಾರೆ. ಆದರೂ ಸಾಕಷ್ಟು ಜನ ಬಣ್ಣದ ಗಣಪತಿಯನ್ನೇ ಪೂಜೆ ಮಾಡುತ್ತಾರೆ. ಪರಿಸರದ ರಕ್ಷಣೆಯನ್ನು ಗೌರವಿಸಿದ ಸುಬುದೇಂದ್ರ ಶ್ರೀಗಳು ಬರುವ ಭಕ್ತಗಣಕ್ಕೆ ಮಣ್ಣಿನ ಗಣೇಶನನ್ನು ನೀಡಿದರು. ಅವರಿಂದ ಮಣ್ಣಿನ ಗಣಪತಿಯನ್ನು ತೆಗೆದುಕೊಂಡು ಹೋಗಿ ಭಕ್ತಿಯಿಂದ ಪೂಜೆ ಮಾಡಿದ್ದಾರೆ. ನಾಡಿನೆಲ್ಲೆಡೆ ಸಾಕಷ್ಟು ಜನ ಮನೆಯಲ್ಲಿಯೂ ಗಣೇಶನನ್ನು ಇಟ್ಟು ಪೂಜೆ ಮಾಡುತ್ತಿದ್ದಾರೆ.


