ಬೆಂಗಳೂರು: ಜಾತಿ ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ನಾಗಮೋಹನ್ ದಾಸ್ ವರದಿ ಸಂಬಂಧ ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗುತ್ತದೆ. ಈ ಸಭೆಯಲ್ಲಿ ನಾಗಮೋಹನ್ ದಾಸ್ ವರದಿ ಸಂಬಂಧ ಸುಧೀರ್ಘ ಚರ್ಚೆ ನಡೆಸಲಿದ್ದಾರೆ. ಈ ಹಿಂದೆ ವರದಿ ಬಗ್ಗೆ ಎಡಗೈ, ಬಲಗೈ ಸಮುದಾಯದ ನಾಯಕರಲ್ಲಿ ಒಮ್ಮತ ಮೂಡದ ಹಿನ್ನೆಲೆ ಇಂದು ಸಭೆಯನ್ನ ಮಾಡಲಾಗುತ್ತದೆ. ಸಭೆಯಲ್ಲಿ ಈ ಬಾರಿಯೂ ಸಚಿವರ ಅಭಿಪ್ರಾಯವನ್ನು ಆಲಿಸಲಿದ್ದು, ಆ ನಂತರ ಸಿಎಂ ಸಿದ್ದರಾಮಯ್ಯ ಒಂದು ನಿರ್ಧಾರಕ್ಕೆ ಬರಲಿದ್ದಾರೆ.
ಇನ್ನು ವರದಿಯಲ್ಲಿ ವೈಜ್ಞಾನಿಕ, ತರ್ಕಬದ್ಧ ಮಾನದಂಡ ಅನುಸರಿಸಿಲ್ಲ ಎಂಬ ಆಕ್ಷೇಪವೂ ಕೇಳಿ ಬಂದಿದೆ. ಬೇಡ ಜಂಗಮ, ಬುಡ್ಗ ಜಂಗಮ ಜಾತಿಗಳನ್ನು ಒಂದೇ ಕಾಲಂನಲ್ಲಿ ನಮೂದಿಸಿ ಗೊಂದಲ ಸೃಷ್ಟಿಸಲಾಗಿದೆ ಎಂಬ ಅಸಮಾಧಾನ ಹಲವರದ್ದು. ಈವರೆಗೂ ರಾಜಕೀಯ ಪ್ರಾತಿನಿಧ್ಯವನ್ನೇ ಪಡೆಯದ 40ಕ್ಕೂ ಹೆಚ್ಚು ಸಮುದಾಯವಳಿವೆ. ಆದರೂ ಅತಿ ಹಿಂದುಳಿದ ಸಮುದಾಯಗಳು ಎಂದು ಗುರುತಿಸದೇ ಅದನ್ನು ಗ್ರೂಪ್ ಸಿ ಪಟ್ಟಿಗೆ ಸೇರಿಸಲಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಜೊತೆಗೆ ಇನ್ನೂ ಅತಿ ಕಡಿಮೆ ರಾಜಕೀಯ ಪ್ರಾತಿನಿಧ್ಯ ಪಡೆದ 50ಕ್ಕೂ ಹೆಚ್ಚು ಜಾತಿಗಳ ವಿಷಯದಲ್ಲೂ ಆಯೋಗ ತರ್ಕವಿಲ್ಲದೇ ಮಾನದಂಡಗಳನ್ನು ಅನುಸರಿಸಿದೆ ಎಂಬ ಬೇಸರವನ್ನು ಕೆಲವರು ಹೊರ ಹಾಕಿದ್ದಾರೆ.
ಈ ಸಂಬಂಧ ಇಂದು ನಡೆಯುವ ಸಂಪುಟ ಸಭೆಯಲ್ಲಿ ಗೊಂದಲ ಬಗೆಹರಿಯಲಿದೆಯೋ ಇಲ್ಲವೋ ಎಂಬ ಕುತೂಹಲವನ್ನು ಹೆಚ್ಚು ಮಾಡಿದೆ. ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು ಕಲ್ಪಿಸಲು ಉಪಪಂಗಡಗಳ ಅಂಕಿ-ಅಂಶ ಸಮೀಕ್ಷೆ ನಡೆಸಿದ್ದ ನಾಗಮೋಹನ್ ದಾಸ್ ಆಯೋಗವು ಆಗಸ್ಟ್ 4 ರಂದು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ.


