ಚಿತ್ರದುರ್ಗ: ಬಾಲ್ಯ ವಿವಾಹ ಅಪರಾಧ ಎಂದು ಗೊತ್ತಿದ್ದರು ಕೆಲವೊಂದು ಕಡೆ ಈಗಲೂ ಅದನ್ನ ಪಾಲನೆ ಮಾಡುವ ಧೈರ್ಯ ಮಾಡುತ್ತಾರೆ. ಅದನ್ನ ಖಂಡಿಸುವ ಧೈರ್ಯವನ್ನ ಹೆಣ್ಣು ಮಕ್ಕಳು ಮಾಡಬೇಕು. ಆದರೆ ಎಲ್ಲಾ ಹೆಣ್ಣು ಮಕ್ಕಳಿಗೂ ಆ ಧೈರ್ಯ ಇರೋದಿಲ್ಲ. ಆದರೆ ಚಿತ್ರದುರ್ಗದಲ್ಲಿ 16 ವರ್ಷದ ಹೆಣ್ಣು ಮಗು ತಮ್ಮ ಮದುವೆ ವಿಚಾರಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತನ್ನ ಪೋಷಕರು ತನ್ನ ಮದುವೆಯ ಸಿದ್ಧತೆ ನಡೆಸುತ್ತಿದ್ದಾರೆ. ದಯವಿಟ್ಟು ಅದನ್ನು ತಪ್ಪಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅದರಲ್ಲೂ ಈ ಮದುವೆ ಎರಡನೇ ಮದುವೆಯಾಗಿತ್ತು. ಹೆಂಡತಿಯನ್ನು ಕಳೆದುಕೊಂಡ ವ್ಯಕ್ತಿಗೆ ಈ ಪುಟ್ಟ ಬಾಲಕಿಯನ್ನು ಕೊಟ್ಟು ಮದುವೆ ಮಾಡುವುದಕ್ಕೆ ಎಲ್ಲಾ ತಯಾರಿ ನಡೆದಿತ್ತು. ಸದ್ಯ ಅದರಿಂದ ಆ ಹೆಣ್ಣು ಮಗು ಬಚಾವ್ ಆಗಿದೆ.
ಪೊಲೀಸ್ ಠಾಣೆಗೆ ಹೋದ ಬಾಲಕಿ ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟ ಮುಂದೆ ತನ್ನ ಸಮಸ್ಯೆಯನ್ನ ವಿವರಿಸಿದ್ದಾಳೆ. ನನಗೆ ವಯಸ್ಸಿನ್ನು ಹದಿನಾರು ವರ್ಷ ಅಷ್ಟೇ. ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಪೊಲೀಸ್ ಸಿಬ್ಬಂದಿ ಶಾಲೆಗೆ ಬಂದು ಬಾಲ್ಯ ವಿವಾಹವಾದಾಗ ಅನುಭವಿಸುವ ತೊಂದರೆ, ಮಾನಸಿಕ, ದೈಹಿಕ ಅಸಮತೋಲನದಿಂದ ಆಗುವ ಅನಾನುಕೂಲ, ಮುಂಬರುವ ದಿನಗಳಲ್ಲಿ ಬಂದೊದಗಬಹುದಾದ ಎಡವಟ್ಟು ಬಗ್ಗೆ ಜಾಗೃತಿ ಮೂಡಿಸಿದ್ದರು. ಅಂದು ಶಾಲೆಯಲ್ಲಿ ಕೇಳಿದ್ದ ಪೊಲೀಸರ ಬುದ್ಧಿ ಮಾತು ನೆನಪಾಗಿ ಪೊಲೀಸ್ ಠಾಣೆಗೆ ಬಂದೆ ಎಂದು ಆ ಬಾಲಕಿ ಅಳಲನ್ನು ತೋಡಿಕೊಂಡಿದ್ದಾಳೆ. ಅಂದು ಪೊಲೀಸರು ಹೇಳಿದ ಬುದ್ದಿ ಮಾತಿನಿಂದ ಆ ಬಾಲಕಿ ತೆಗೆದುಕೊಂಡ ಧೈರ್ಯಕ್ಕೆ ಒಂದು ಸಲಾಂ ಹೇಳಲೇಬೇಕು. ಈಕೆಯ ಧೈರ್ಯಕ್ಕೆ ಚಳ್ಳಕೆರೆಯ ಡಿವೈಎಸ್ಪಿ ಡಿ ರಾಜಣ್ಣ ಶಬ್ಬಾಶ್ ಎಂದಿದ್ದಾರೆ.






