ಆಗಸ್ಟ್ 05 ರಿಂದ ಕೆ.ಎಸ್.ಆರ್.ಟಿ.ಸಿ. ನೌಕರರ ಅನಿರ್ಧಿಷ್ಟಾವಧಿ ಮುಷ್ಕರ : ಕಾಂ.ಜಿ.ಸಿ.ಸುರೇಶ್‍ಬಾಬು

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 01 : 38 ತಿಂಗಳ ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆ.5 ರಿಂದ ಕೆ.ಎಸ್.ಆರ್.ಟಿ.ಸಿ. ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆಂದು ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್(ಎ.ಐ.ಟಿ.ಯು.ಸಿ.) ಜಿಲ್ಲಾ ಗೌರವಾಧ್ಯಕ್ಷ ಕಾಂ.ಜಿ.ಸಿ.ಸುರೇಶ್‍ಬಾಬು ತಿಳಿಸಿದರು.

 

ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಕ್ತಿ ಯೋಜನೆ ಯಶಸ್ವಿಯಾಗಲು ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳ ಪರಿಶ್ರಮವಿದೆ. ಚಾಲಕರು, ನಿರ್ವಾಹಕರು ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ. 38 ತಿಂಗಳ ಬಾಕಿ ವೇತನ ಕೇಳಿದರೆ ಎಸ್ಮಾ ಜಾರಿಗೊಳಿಸಿ ಕ್ರಮ ಕೈಗೊಳ್ಳುತ್ತೇವೆಂದು ರಾಜ್ಯ ಸರ್ಕಾರ ಬೆದರಿಕೆ ಹಾಕುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇವರುಗಳು ಹೇಳೋದೊಂದು ಮಾಡೋದೊಂದು ಎನ್ನುವಂತಾಗಿದೆ. ಅದಕ್ಕಾಗಿ ಸಾರಿಗೆ ನೌಕರರು ಅನಿವಾರ್ಯವಾಗಿ ಮುಷ್ಕರ ಇಳಿಯಬೇಕಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು ಸಹಕರಿಸುವಂತೆ ಕಾಂ.ಜಿ.ಸಿ.ಸುರೇಶ್‍ಬಾಬು ಮನವಿ ಮಾಡಿದರು.

ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‍ನ ನಿವೃತ್ತ ಜಿಲ್ಲಾಧ್ಯಕ್ಷ ರಾಜಪ್ಪ ಮಾತನಾಡಿ 1-1-2020 ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆಯಾಗಬೇಕು. ನಿವೃತ್ತಿಯಾದವರ ಜೀವನ ಕಷ್ಟದಲ್ಲಿದೆ. ಶಕ್ತಿ ಯೋಜನೆ ಯಶಸ್ವಿಯಾಗಿದೆ ಎಂದರೆ ಅದಕ್ಕೆ ಚಾಲಕರು, ನಿರ್ವಾಹಕರು, ಸಿಬ್ಬಂದಿಗಳೆ ಕಾರಣ ಆ.5 ರೊಳಗೆ ನಮ್ಮ ಬಾಕಿ ವೇತನ ನೀಡಬೇಕು. ಇಲ್ಲವಾದಲ್ಲಿ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲವೆಂದು ಹೇಳಿದರು.

ಫೆಡರೇಷನ್ ಉಪಾಧ್ಯಕ್ಷ ರಹೀಂಸಾಬ್ ಮಾತನಾಡುತ್ತ ರಾಜ್ಯದಲ್ಲಿ ಹದಿನಾಲ್ಕು ಸಾವಿರ ಸಿಬ್ಬಂದಿಗಳ ಕೊರತೆಯಿದೆ. ನಾಲ್ಕು ಸಾವಿರ ಬಸ್‍ಗಳು ಕಡಿಮೆಯಿದೆ. ಇದ್ದುದರಲ್ಲೆ ಸುಧಾರಿಸಿಕೊಂಡು ಸಾರಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಿಸಬೇಕು. ಇದ್ಯಾವ ಸೌಲಭ್ಯಗಳು ನಮಗೆ ದೊರಕುತ್ತಿಲ್ಲ. ಅದಕ್ಕಾಗಿ ಮುಷ್ಕರಕ್ಕೆ ಬೀದಿಗಿಳಿಯಲಿದ್ದೇವೆಂದರು.

ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವರ್ಕರ್ಸ್ ತಾಲ್ಲೂಕು ಅಧ್ಯಕ್ಷ ಟಿ.ಆರ್.ಉಮಾಪತಿ, ಓಂಕಾರಪ್ಪ, ಮೂರ್ತಿನಾಯ್ಕ, ರಾಮಾಂಜನೇಯ ಇವರುಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks