ಸುದ್ದಿಒನ್, ಚಿತ್ರದುರ್ಗ, ಜುಲೈ. 22 : ಯುವಪೀಳಿಗೆಯಲ್ಲಿ ಬಾಹ್ಯ ಸೌಂದರ್ಯಕ್ಕೆ ಇರುವ ಮನ್ನಣೆ ಮತ್ತು ಆಸಕ್ತಿ ಆಂತರಿಕ ಸೌಂದರ್ಯಕ್ಕಿಲ್ಲ. ಅಂಗಸೌಷ್ಠವದ ಸಂಪಾದನೆಯ ಬಗ್ಗೆ ಯುವಜನತೆ ಆಸಕ್ತಿ ತೋರುತ್ತಾರೆ. ಆಂತರಂಗಿಕವಾಗಿ ಬೇಕಾಗುವ ಜ್ಞಾನದ ಧೀಶಕ್ತಿಯನ್ನು ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಅತಿಚಿಕ್ಕ ವಯಸ್ಸಿಗೆ ಮಾರಕ ವ್ಯಸನಗಳಿಗೆ ಬಲಿಯಾಗಿ ಅನಾರೋಗ್ಯ ಪೀಡಿತರಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಇರುವ ಪೂರ್ವಿಕರ ಭದ್ರಬುನಾದಿಯನ್ನು ಸರಳೀಕರಣಗೊಳಿಸಿ ಗಟ್ಟಿತನದ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಪಿಳ್ಳೆಕೆರೇನಹಳ್ಳಿಯ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಂಗಸೌರಭ ರಂಗೋತ್ಸವ ನಿಮಿತ್ತ ರಂಗ ಉಪನ್ಯಾಸ, ರಂಗ ಸಂಗೀತ, ರಂಗನಾಟಕಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಬಿ.ಇಡಿ ಪ್ರಶಿಕ್ಷಣಾರ್ಥಿಗಳನ್ನು ಕುರಿತು ಶಿಕ್ಷಣ ಮತ್ತು ರಂಗಭೂಮಿ ವಿಷಯವಾಗಿ ಉಪನ್ಯಾಸ ನೀಡಿದರು.
ಬೋಧನೆಗೆ ತಯಾರಾಗುವ ಶಿಕ್ಷಕರಿಗೆ ದೈಹಿಕ ಹಾಗೂ ಮಾನಸಿಕವಾಗಿ ಅಂತರಂಗದ ಸಧೃಡತೆಯ ಕೊರತೆಯಿದೆ. ವಿಷಯವಸ್ತು ಸಂಪಾದನೆ, ಗಮನದ ಕೇಂದ್ರೀಕರಣ, ಉದ್ದೇಶ, ಘಟಕಾಂಶಗಳು, ಮಾಂಸಖಂಡಗಳ ಸ್ವಸ್ಥಸ್ಥಿತಿ, ಧ್ವನಿಯ ಏರಿಳಿತ, ಪಾಠೋಪಕರಣ, ಪೀಠೋಪಕರಣ ಬಳಕೆ ಮುಂತಾದವುಗಳನ್ನು ಶಿಕ್ಷಕರು ನಿರಂತರವಾಗಿ ತಮ್ಮ ವೃತ್ತಿಬದುಕಿನಲ್ಲಿ ವ್ಯವಸ್ಥಿತವಾಗಿ ಅನುಸರಿಸಬೇಕು. ರಂಗಭೂಮಿಯ ಆಯಾಮಗಳು ಶಿಕ್ಷಣ ಕ್ಷೇತ್ರಕ್ಕೆ ಸಹಕಾರಿಯಾಗಿವೆ. ತರಬೇತಿ ಪಡೆದ ರಂಗಭೂಮಿ ಕಲಾವಿದರನ್ನು ಶಿಕ್ಷಣ ತರಬೇತಿಗಳಿಗೆ ಹೆಚ್ಚು ಬಳಸುವಂತಾಗಬೇಕು. ಶಾಲಾಕಾಲೇಜುಗಳಿಗೆ ರಂಗಶಿಕ್ಷಕರನ್ನು ನೇಮಿಸಿದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪೂರಕ ಪರಿಹಾರ ಸಿಗುತ್ತದೆ ಜೊತೆಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಬೋಧನಾ ಪ್ರಕ್ರಿಯೆಗೆ ಶಕ್ತಿ ತುಂಬುತ್ತದೆ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ರಂಗಸೌರಭ ರಂಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಕರು ಜ್ಞಾನಪೂರ್ಣ ಸಂಪನ್ನರಾಗಬೇಕು. ನಿರಂತರ ಓದು, ಕಾರ್ಯಕ್ಷಮತೆ, ಬದ್ಧತೆ ಉಳಿಸಿಕೊಳ್ಳುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಹಾಗೂ ಪ್ರಾಚಾರ್ಯೆ ಎಂ.ಆರ್.ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ವಿಜ್ಹನ್ ಅಕಾಡೆಮಿಯ ಸಿ.ಪಿ.ಜ್ಞಾನದೇವ್, ಉಪನ್ಯಾಸಕರಾದ ಹೆಚ್.ಎನ್.ಶಿವಕುಮಾರ್, ಡಾ.ಹನುಮಂತರೆಡ್ಡಿ, ಓ.ಎಂ.ಮಂಜುನಾಥ, ಟಿ.ವೈ ಗೀತಾ, ಎಸ್.ಮಂಜುನಾಥಪ್ಪ, ರಂಗಸೌರಭ ಕಲಾ ಸಂಘದ ನಿರ್ದೇಶಕ ಪಿ.ಎನ್.ಗಿರೀಶ್ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಚಲನಚಿತ್ರ ಹಾಸ್ಯನಟ ಹಾಗೂ ನಾಟಕಕಾರ ಮೈಸೂರು ರಮಾನಂದ ರಚನೆ ಮತ್ತು ನಿರ್ದೇಶನದಲ್ಲಿ ಭ್ರಷ್ಟಾಚಾರ ಕೂಪದಲ್ಲಿ ರೈತನೋರ್ವ ಬಸವಳಿದ ಕಥಾಹಂದರವಿರುವ ನಾನಿನ್ನೂ ಸತ್ತಿಲ್ಲ ಎಂಬ ಹಾಸ್ಯನಾಟಕವನ್ನು ಬೆಂಗಳೂರಿನ ಗೆಜ್ಜೆಹೆಜ್ಜೆ ರಂಗ ತಂಡದ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಪ್ರಶಿಕ್ಷಣಾರ್ಥಿಗಳಾದ ಕೆ.ಸಿ.ರೇಖಾ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಗೌಡ ಸ್ವಾಗತಿಸಿದರು. ಎಸ್.ಎಂ.ಅಮೂಲ್ಯ ವಂದಿಸಿದರು. ಆರ್.ಟಿ. ದೀಪಾ ಕಾರ್ಯಕ್ರಮ ನಿರೂಪಿಸಿದರು.




