ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಏಳು ತಿಂಗಳು ಜೈಲು ವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಗೆ ಬಂದ ದರ್ಶನ್ ಹಾಗೂ ಸಂಗಡಿಗರಿಗೆ ಇಂದು ಮಹತ್ವದ ದಿನವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವುದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಸಂಬಂಧ ವಿಚಾರಣೆ ನಡೆಯಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ಪ್ರಶ್ನೆ ಮಾಡಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈಗಾಗಲೇ ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ರಾಜ್ಯ ಸರ್ಕಾರದ ಪರ ವಾದವನ್ನು ಸುಪ್ರೀಂ ಕೋರ್ಟ್ ಆಲಿಸಿದೆ. ದಾಖಲೆಗಳನ್ನು ಪಡೆದಿರುವ ಪೀಠವೂ ಇಂದು ಆರೋಪಿಗಳ ಪರವಾದ ವಾದವನ್ನು ಕೇಳಲಿದ್ದು ಬಳಿಕ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಕಳೆದ ವಾರ ನಡೆದ ವಾದದ ನಡುವೆ ಸುಪ್ರೀಂ ಕೋರ್ಟ್ ಹೈಕೋರ್ಟ್ ನಡೆಯ ಬಗ್ಗೆ ಬರೆಸರ ವ್ಯಕ್ತಪಡಿಸಿತ್ತು. ಹೈಕೋರ್ಟ್ ಆದೇಶದಲ್ಲಿ ಚಡಪಡಿಕೆ ಎದ್ದು ಕಾಣಿಸುತ್ತಿದೆ. ನಮಗೆ ಪೊಲೀಸರು ನೀಡಿರುವ ಸಾಕ್ಷಿಗಳು ತೃಪ್ತಿ ತಂದಿವೆ. ಬೇಲ್ ನೀಡಲು ಹೈಕೋರ್ಟ್ ನೀಡಿರುವ ಕಾರಣಗಳು ಸಮಂಜಸವಾಗಿಲ್ಲ. ಜಾಮೀನಿನ ವಿಚಾರದಲ್ಲಿ ನಾವೇಕೆ ಮಧ್ಯಪ್ರವೇಶ ಮಾಡಬಾರದು ಎಂದು ನಟ ದರ್ಶನ್ ಪರ ವಕೀಲರಾದ ಕಪಿಲ್ ಸಿಬಲ್ ಅವರಿಗೆ ಪ್ರಶ್ನೆ ಮಾಡಿತ್ತು. ಇದೀಗ ಇಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಮಹದೇವನ್ ನೇತೃತ್ವದಲ್ಲಿ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ದರ್ಶನ್ ಹಾಗೂ ಇನ್ನಿತರರ ಭವಿಷ್ಯ ಏನಾಗಬಹುದು ಎಂಬ ಆತಂಕ ಆರೋಪಿ ಸ್ಥಾನದಲ್ಲಿರುವವರ ಮನಸ್ಸಲ್ಲಿದೆ.



