ಸುದ್ದಿಒನ್, ಚಿತ್ರದುರ್ಗ, ಜುಲೈ. 19 : ದಿನಕ್ಕೆ ಸಾವಿರಾರು ಲೀಟರ್ ಪೆಟ್ರೋಲ್ ವ್ಯಾಪಾರ ಮಾಡುವ ಪೆಟ್ರೋಲ್ ಬಂಕ್ ಗಳು, ನಾಗರೀಕರಿಗೆ, ಗಿರಾಕಿಗಳಿಗೆ, ಗ್ರಾಹಕರಿಗೆ ಉಚಿತ ಗಾಳಿ, ಉಚಿತ ಕುಡಿಯುವ ನೀರು, ಉಚಿತ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು, ಸಾಮಾಜಿಕ ಜವಾಬ್ದಾರಿಯಿಂದ ಗ್ರಾಹಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕಾದ್ದು ಕರ್ತವ್ಯವಾಗಿದೆ, ಆದರೆ ಬಹಳಷ್ಟು ಪೆಟ್ರೋಲ್ ಬಂಕ್ ಗಳು ಉಚಿತ ಗಾಳಿ, ನೀರು, ಶೌಚಾಲಯಗಳಿಲ್ಲದೆ ವ್ಯವಹಾರ ಮಾಡುತ್ತಿದ್ದು, ಬರೀ ಲಾಭ ಗಳಿಕೆ ಒಂದೇ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ, ಆದ್ದರಿಂದ ಪೆಟ್ರೋಲ್ ಬಂಕ್ ಮಾಲೀಕರುಗಳು ಸ್ವಲ್ಪಮಟ್ಟಿಗಾದರೂ ಗ್ರಾಹಕರ ಸೇವೆಗಾಗಿ, ಸೇವಾ ಮನೋಭಾವನೆಯಿಂದ, ಕೆಲವು ನಿಯಮ ಬದ್ಧವಾದ ಸೌಕರ್ಯಗಳನ್ನ ಕಲ್ಪಿಸಿ ಕೊಡಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿ ಅವರು ವಿನಂತಿಸಿಕೊಂಡಿದ್ದಾರೆ.
ಅವರು ಜೆಸಿಆರ್ ಬಳಿ ಇರುವ ಪೆಟ್ರೋಲ್ ಬಂಕ್ ನಲ್ಲಿ, ದ್ವಿಚಕ್ರವಾಹನಕ್ಕೆ ಗಾಳಿ ತುಂಬುವ ಹೊಸ ಯಂತ್ರವನ್ನು ಉಪಯೋಗಿಸುತ್ತಾ, ವಾಹನ ಚಾಲಕರಿಗೆ ತಮ್ಮ ಗಾಡಿಯ ಟೈರಿನ ಗಾಳಿಯ ಒತ್ತಡದ ಬಗ್ಗೆ ಜಾಗೃತಿ ಮೂಡಿಸುತ್ತಾ, ಪೆಟ್ರೋಲ್ ಉಳಿತಾಯ ಮಾಡಲು ಚಕ್ರದ ಗಾಳಿಯು ಸಹ ಮುಖ್ಯವಾದಂತ ವಸ್ತುವಾಗಿದೆ ಎಂದು ಹೇಳಿದರು.
ಪೆಟ್ರೋಲ್ ಉಳಿತಾಯದಲ್ಲಿ ವಾಹನಗಳ ಟೈರಿನ ಗಾಳಿಯ ಸಾಂದ್ರತೆ, ಸಮ ಪ್ರಮಾಣದಲ್ಲಿದ್ದು, ಗಾಡಿ ಚಾಲನೆಗೆ ಅನುಕೂಲ ಮಾಡಿಕೊಟ್ಟರೆ ಮಾತ್ರ, ಪೆಟ್ರೋಲ್ ಉಳಿತಾಯಕ್ಕೂ ಸಹ ಅನುಕೂಲವಾಗುತ್ತದೆ, ಆದ್ದರಿಂದ ಪ್ರತಿ ಗಾಡಿಗಳಿಗೂ ಸಹ ಪೆಟ್ರೋಲ್ ಹಾಕಿಸಿಕೊಂಡ 15 ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ತಮ್ಮ ಗಾಡಿಯ ಚಕ್ರದ ಗಾಳಿಯ ಒತ್ತಡವನ್ನ ಕಂಡುಹಿಡಿದು, ಅವುಗಳನ್ನು ಸಮ ಪ್ರಮಾಣದಲ್ಲಿ ತುಂಬಿಸಿಕೊಳ್ಳುವಂತಹ, ಸ್ವಸಹಾಯ ಗಾಳಿಯಂತ್ರಗಳನ್ನ ಪೆಟ್ರೋಲ್ ಬಂಕ್ಗಳಲ್ಲಿ ಸ್ಥಾಪಿಸಬೇಕು ಎಂದು ವಿನಂತಿಸಿಕೊಂಡರು.
ಬಹಳಷ್ಟು ಜನ ದ್ವಿಚಕ್ರವಾಹನಗಳು ಮತ್ತು ಕಾರಿನ ಮಾಲಕರುಗಳು ತಮ್ಮ ಟೈರಿನ ಗಾಡಿಯ ಒತ್ತಡವನ್ನ ಸರಿಯಾಗಿ ಗಮನಿಸದೆ ಹಾಗೆ ಗಾಡಿ ಚಲಾಯಿಸುವುದರಿಂದ, ಹೆಚ್ಚು ಪೆಟ್ರೋಲ್, ಡೀಸೆಲ್ ಬಳಕೆಯಾಗುತ್ತಿದ್ದು, ಜನರಿಗೆ ಪೆಟ್ರೋಲ್ ಬಂಕ್ ಗಳಲ್ಲಿ ಉಚಿತವಾಗಿ ಗಾಳಿಯನ್ನ ಹಿಡಿದುಕೊಳ್ಳುವ ಯಂತ್ರವನ್ನು ಸ್ಥಾಪನೆ ಮಾಡಿಕೊಟ್ಟರೆ, ಒಂದಿಷ್ಟು ಗ್ರಾಹಕರು ಅವುಗಳನ್ನು ಬಳಕೆ ಮಾಡಿ, ಪೆಟ್ರೋಲ್ ಉಳಿಸುವುದರ ಬಗ್ಗೆ, ಪರಿಸರ ಉಳಿಸುವುದರ ಬಗ್ಗೆ ಹಾಗೂ ತಮ್ಮ ಹಣ ಉಳಿಸುವುದರ ಬಗ್ಗೆಯೂ ಸಹ ಚಿಂತಿತರಾಗುತ್ತಾರೆ ಎಂದರು.
ನಗರದಲ್ಲಿರುವ ಹಲವಾರು ಪೆಟ್ರೋಲ್ ಬಂಕ್ ಗಳಲ್ಲಿ ಕೆಲವೊಂದಿಷ್ಟು ಪೆಟ್ರೋಲ್ ಬಂಕ್ ಗಳು ಮಾತ್ರ ಉಚಿತ ಗಾಳಿ ನೀಡುವ ಯಂತ್ರಗಳನ್ನ ಸ್ಥಾಪನೆ ಮಾಡಿದ್ದಾರೆ, ಉಳಿದಂತಹ ಪೆಟ್ರೋಲ್ ಬಂಕ್ ಗಳು ಕೆಟ್ಟು ಹೋದ ಯಂತ್ರವನ್ನು ನಿಲ್ಲಿಸಿಕೊಂಡು, ಹಾಗೆ ಗ್ರಾಹಕರಿಗೆ, ಯಾವುದೇ ಸೌಲಭ್ಯಗಳನ್ನು ನೀಡದಂತೆ ವ್ಯವಹಾರ ಮಾಡುತ್ತಿದ್ದಾರೆ, ಇದನ್ನ ಪೆಟ್ರೋಲಿಯಂ ಇಲಾಖೆ ಮತ್ತು ಜಿಲ್ಲಾಡಳಿತ ಗಮನಹರಿಸಿ, ಪ್ರತಿ ಪೆಟ್ರೋಲ್ ಬಂಕ್ ನಲ್ಲೂ ಸಹ ಉಚಿತವಾಗಿ ಗಾಳಿ, ನೀಡುವ ಯಂತ್ರವನ್ನು ಸ್ಥಾಪಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.
ಜೆ ಸಿ ಆರ್ ಬಳಿ ಇರುವ ಒಂದು ಪೆಟ್ರೋಲ್ ಬಂಕ್ ನ ಮಾಲೀಕರು ಕೆಟ್ಟು ಹೋದ ಯಂತ್ರವನ್ನು ಮತ್ತೆ ಹೊಸದಾಗಿ ಖರೀದಿ ಮಾಡಿ, ಗ್ರಾಹಕರಿಗೆ ಉಚಿತವಾಗಿ ಗಾಳಿ ನೀಡುವ ಯಂತ್ರವನ್ನು ಸ್ಥಾಪಿಸಿರುವುದನ್ನು ಶ್ಲಾಘಿಸಿ, ಇದೇ ರೀತಿ ಬೇರೆ ಪೆಟ್ರೋಲ್ ಬಂಕ್ ನ ಮಾಲೀಕರು ಸಹ, ಇದನ್ನ ಮಾದರಿಯಾಗಿ ತೆಗೆದುಕೊಂಡು ತಮ್ಮ ಪೆಟ್ರೋಲ್ ಬಂಕ್ ಗಳಲ್ಲಿ ಸಹ ಗ್ರಾಹಕರಿಗೆ ಉಚಿತ ಗಾಳಿ, ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರೆ ಜನರು ಒಂದಿಷ್ಟು ವೈಜ್ಞಾನಿಕವಾಗಿ ತಮ್ಮ ಚಕ್ರದ ಟೈರಿನ ಗಾಳಿಯ ಸಾಂದ್ರತೆಯನ್ನು ಕಂಡುಹಿಡಿದುಕೊಂಡು, ಗಾಡಿಯ ಮೈಲೇಜ್ ಅನ್ನ ಎತ್ತರಿಸಿಕೊಂಡು, ಪೆಟ್ರೋಲ್ ಉಳಿತಾಯಕ್ಕೆ ಸಹಾಯವಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.
ಪೆಟ್ರೋಲ್ ಬಂಕ್ ಗಳನ್ನು ಸಹ ನಿಯಂತ್ರಿಸುವ ಇಲಾಖೆ, ಸರ್ಕಾರದ ಅಧಿಕಾರಿಗಳು, ಈ ಯಂತ್ರಗಳ ಬಗ್ಗೆ ಸ್ವಲ್ಪ ಗಮನಹರಿಸಿ, ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಈ ಯಂತ್ರವನ್ನು ಪ್ರತಿಷ್ಠಾಪಿಸಲು. ಕೆಟ್ಟಿದ್ದರೆ ರಿಪೇರಿ ಮಾಡಲು ಅವರಿಗೆ ಮನದಟ್ಟು ಮಾಡಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.
ಹೊರಗಡೆ ಒಂದು ಚಕ್ರಕ್ಕೆ ಗಾಳಿ ಹಾಕಿಸಲು ಐದು ರೂಪಾಯಿಯಷ್ಟು ಹಣ ಪಾವತಿಸಬೇಕಾಗುತ್ತದೆ, ನಾಲ್ಕು ಚಕ್ರ ಗಾಡಿಗೆ 20 ರೂಪಾಯಿ ಸಂದಾಯ ಮಾಡಬೇಕಾಗುತ್ತದೆ, ಅದೇ ಹಣವನ್ನ ಬಡವರು, ಮಧ್ಯಮ ವರ್ಗದವರು ಸ್ವಲ್ಪಮಟ್ಟಿಗೆ ಪೆಟ್ರೋಲ್ ಬಂಕ್ ನಲ್ಲಿ ಗಾಳಿ ಹಾಕಿಸಿಕೊಂಡು, ಹಣ ಉಳಿತಾಯ ಮಾಡಿಕೊಂಡು, ಪೆಟ್ರೋಲ್ ಉಳಿತಾಯ ಮಾಡಿಕೊಂಡು, ಪರಿಸರಕ್ಕೆ ಒಂದಿಷ್ಟು ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಡಾ. ಎಚ್. ಕೆ. ಎಸ್. ಸ್ವಾಮಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






