ಸುದ್ದಿಒನ್, ಚಿತ್ರದುರ್ಗ, ಜೂನ್. 22 : ನಗರದ ಹೊರವಲಯದ ಮಾಳಪ್ಪನಹಟ್ಟಿಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. 82 ವರ್ಷದ ವೃದ್ಧ ಬಸಪ್ಪ ಅವರನ್ನು ಮಕ್ಕಳಾದ ಹನುಮಂತಪ್ಪ ಜಯಪ್ಪ ಸೇರಿದಂತೆ ಮೂವರು ಮಕ್ಕಳಿದ್ದರೂ ಸಹಾ ತಂದೆಯನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂಬ ಗಂಭೀರವಾದ ಆರೋಪ ಕೇಳಿ ಬಂದಿದೆ. ಸದ್ಯ ಅನಾಥಶ್ರಮ, ದೇವಸ್ಥಾನ ಅಂತ ಸಂಕಟ ಪಟ್ಟಿದ ಆ ಹಿರಿ ಜೀವ ಅಧಿಕಾರಿಗಳ ಸಹಾಯದಿಂದ ಮನೆ ಸೇರಿಕೊಂಡಿದ್ದಾರೆ.
ಈ ಘಟನೆ ಸಂಬಂಧ ಮಗ ಹೇಳಿದ್ದೇನು : ನಾವೂ ಮೂರು ಜನ ಮಕ್ಕಳು. ಬಹಳ ದಿನಗಳಿಂದ ಅವರು ಹೊರಗಡೆಯೇ ಇದ್ರು. ಒಳಗೆ ಕರೆದುಕೊಂಡು ಬಂದು ಇಟ್ಟುಕೊಂಡಿದ್ದೆವು. ಆದ್ರೂ ಮನೆ ಸೇರ್ತಾ ಇರಲಿಲ್ಲ. ಇನ್ಮೇಲೆ ತಪ್ಪಾಗದಂತೆ ನೋಡಿಕೊಳ್ತೇವೆ. ನಾವೂ ಹೊರಗಡೆ ಹಾಕಿಲ್ಲ. ನಮ್ಮ ತಾಯಿಗೆ 21 ದಿನ ಊಟ ಹಾಕದೆ ಸಾಯೋದಕ್ಕೆ ಅವರೇ ಕಾರಣ. ನಮ್ಮನ್ನು ಕೇರ್ ಮಾಡ್ಲಿಲ್ಲ. ಓದಿಸ್ಲಿಲ್ಲ ಏನಿಲ್ಲ. ನಮಗೆ ಮದುವೆನು ಮಾಡಿಸ್ಲಿಲ್ಲ. ಬೇರೆ ಯಾರೋ ಹೆಣ್ಣು ನೋಡಿ ಮದುವೆ ಮಾಡಿದ್ದು. ಆಯ್ತು ಬಿಡಿ ಇನ್ಮೇಲೆ ನಾವೂ ನೋಡ್ಕೊಳ್ತೀವಿ.
ಈ ಬಗ್ಗೆ ಉಪವಿಭಾಗಾಧಿಕಾರಿ ಜಿಲಾನಿ ಹೇಳಿದ್ದೇನು: ಕಚೇರಿಯಲ್ಲಿ ಇರಬೇಕಾದ್ರೆ ಒಂದು ಕರೆ ಬಂತು. ಹಿರಿಯ ನಾಗರಿಕರನ್ನ ಒಳಗೆ ಬಿಡದೆ ಮನೆಯಿಂದ ಹೊರಗೆ ಹಾಕಿದ್ದಾರೆ ಅಂತ. ಅಪರಿಚಿತರು ಕರೆದುಕೊಂಡು ಬಂದು ಹಿರಿಯ ನಾಗರಿಕರ ವೇದಿಕೆಗೆ ಬಂದಿದ್ದರು. ಅವರಿಗೆ ಊಟ, ತಿಂಡಿ ಕೊಡಿಸಿ ನಮ್ಮ ಕಡೆಯವರಿಂದ ಮನೆಗೆ ಕಳುಹಿಸಿದೆವು. ಆದರೂ ಮನೆಗೆ ಬಿಟ್ಟುಕೊಂಡಿರಲಿಲ್ಲ. ಅದಕ್ಕೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಜೊತೆಗೆ ಮಾತನಾಡಿ, ಸ್ಥಳಕ್ಕೆ ಬಂದು ನೋಡಿದರೆ ಹೊರಗೆ ಹಾಕಿದ್ದರು. ಬಳಿಕ ನಾವೂ ಬಂದು ಮಕ್ಕಳಿಗೆ ಬುದ್ದಿ ಹೇಳಿದ್ದೇವೆ. ಅವರ ಮಗ ಹೇಳ್ತಾರೆ ಕೌಟುಂಬಿಕ ವಿವಾದ ಇತ್ತು ಅಂತ. ಅವರು ಎಲ್ಲಿಯೂ ಇರ್ತಾ ಇರಲಿಲ್ಲ ಎಂದಿದ್ದಾರೆ. ನಿಮ್ಮ ಕೌಟುಂಬಿಕ ಕಲಹಕ್ಕೆ ಹೀಗೆ ತಂದೆಯವರನ್ನು ಹೊರಗಿಡುವುದು ಸರಿಯಲ್ಲ ಎಂದು ತಿಳಿ ಹೇಳಿದ್ದಾರೆ. ಸದ್ಯಕ್ಕೆ ಆ ವೃದ್ದನನ್ನು ನೋಡಿಕೊಳ್ಳುವಂತೆ ಮಕ್ಕಳಿಗೆ ಉಪ ವಿಭಾಗಾಧಿಕಾರಿ ಸೂಚಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಜಿಲಾನಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು.


