ಇಂದು ಯುಗಾದಿ ಹಬ್ಬ. ಹಿಂದೂಗಳ ಹೊಸ ವರ್ಷಾರಂಭ. ಮರ ಗಿಡಗಳು ಹಳೆ ಎಲೆಗಳನ್ನ ಉದುರಿಸಿ ಹೊಸ ಚಿಗುರನ್ನ ಹೊತ್ತು, ಸುಂದರವಾಗಿ ಕಾಣಿಸುತ್ತಿದೆ. ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬಂದಿದೆ. ಯುಗಾದಿಯೂ ಸಂತೋಷ, ಸಂಭ್ರಮ, ಭರವಸೆಯ ಹೊಸ ಹಬ್ಬವಾಗಿದೆ. ಯುಗಾದಿ ಹಬ್ಬವನ್ನು ಶತ ಶತಮಾನಗಳಿಂದಲೂ ಆಚರಣೆ ಮಾಡಿಕೊಂಡು ಬರಲಾಗಿದೆ. ಶಾತವಾಹನ ರಾಜವಂಶಕ್ಕೂ ಬಹಳ ಹಿಂದಿನದ್ದು. ಹಿಂದೂ ಕ್ಯಾಲೆಂಡರ್ ಪ್ರಕಾರ ಇಂದಿನಿಂದ ಹೊಸ ವರ್ಷ ಆರಂಭವಾಗಿದೆ.
ಕರ್ನಾಟಕದ ಮಂದಿ ಹಾಗೂ ಆಂಧ್ರಪ್ರದೇಶದವರು ಚಾಂದ್ರಾಮಾನ ಯುಗಾದಿಯನ್ನ ಆಚರಿಸುತ್ತಾರೆ. ಯುಗಾದಿ ಹಬ್ಬವೂ ಭಾನುವಾರ ಅಂದ್ರೆ ಇಂದು ಬಂದಿದ್ದು, ಶುಜ್ಲ ಪಕ್ಷದ ಪಾಡ್ಯ ತಿಥಿ ಮಾರ್ಚ್ 29ರ ಸಂಜೆ 5.57ಕ್ಕೆ ಶುರುವಾಗಿ ಮಾರ್ಚ್ 30ರ ಅಪರಾಹ್ನ 2.19ಕ್ಕೆ ಮುಕ್ತಾಯವಾಗಲಿದೆ. ಯುಗಾದಿ ಹಬ್ನದ ದಿನ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಇರಲಿದೆ. ಮನೆಗಳಲ್ಲೂ ಸಿಹಿ ಮಾಡಿ, ದೇವರಿಗೆ ನೈವೇದ್ಯ ಮಾಡಿ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಯುಗಾದಿ ಹಬ್ಬದ ದಿನದಂದು ಎಣ್ಟೆ ಸ್ನಾನ ಮಾಡುವುದಕ್ಕೆ ಹೆಚ್ಚಿನ ಮಹತ್ವವಿದೆ. ಇದನ್ನು ಅಭ್ಯಂಜನ ಸ್ನಾನವೆಂದೂ ಕರೆಯಲಾಗುತ್ತದೆ. ಯುಗಾದಿ ಹಬ್ಬ ಆರಂಭವಾಗುವುದೇ ಈ ಅಭ್ಯಂಜನ ಸ್ನಾನದಿಂದ. ಈ ದಿನ ಅಭ್ಯಂಜನ ಸ್ನಾನ ಮಾಡುವುದರಿಂದ ದೇಹ ಮತ್ತು ಆತ್ಮ ಶುದ್ಧೀಕರಣಗೊಳ್ಳುತ್ತದೆ. ಅಭ್ಯಂಗ ಸ್ನಾನದ ನಂತರ ಹೊಸ ಬಟ್ಟೆಯನ್ನು ಇಲ್ಲವೇ, ಒಗೆದು ಸ್ವಚ್ಛಗೊಳಿಸಿದ ಬಟ್ಟೆಯನ್ನು ಧರಿಸುವ ಸಂಪ್ರದಾಯವಿದೆ. ಹೀಗಾಗಿ ಬೆಳಗ್ಗೆಯೇ ಮನೆಯಲ್ಲಿರುವ ಎಲ್ಲರಿಗೂ ಎಣ್ಣೆ ಹಚ್ಚಲಾಗುತ್ತದೆ. ಸ್ವಲ್ಪ ಸಮಯದ ನಂತರ ಸ್ನಾನ ಮಾಡಿ, ದೇವರಿಗೆ ಪೂಜೆ ಮಾಡಿ, ಹಬ್ಬವನ್ನ ಆಚರಿಸುತ್ತಾರೆ.





















