ನರೇಗಾ ಯೋಜನೆಯಡಿ ಹಾಜರಾತಿ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ : ಕೆ. ತಿಮ್ಮಪ್ಪ ಸೂಚನೆ

2 Min Read

ಚಿತ್ರದುರ್ಗ ಮಾ. 03 : ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಹಾಜರಾತಿಯನ್ನು ಕಡ್ಡಾಯವಾಗಿ ಎರಡು ಬಾರಿ ಎನ್.ಎಂ.ಎಂ.ಎಸ್. ಆ್ಯಪ್ ಮೂಲಕ ನಮೂದಿಸಬೇಕು, ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿ.ಪಂ. ಉಪಕಾರ್ಯದರ್ಶಿ ಕೆ. ತಿಮ್ಮಪ್ಪ ಎಚ್ಚರಿಕೆ ನೀಡಿದರು.

 

ಚಿತ್ರದುರ್ಗದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕಿನ ನರೇಗಾ ಸಿಬ್ಬಂದಿಗಳಿಗೆ ಸೋಮವಾರ ನಡೆದ ನರೇಗಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಹಾಜರಾತಿಯನ್ನು ಎನ್.ಎಂ.ಎಂ.ಎಸ್. ಆ್ಯಪ್ ಮೂಲಕ ತೆಗೆದುಕೊಳ್ಳಬೇಕು.  ಇದರಲ್ಲಿ ನಿರ್ಲಕ್ಷ್ಯ ವಹಿಸುವ ಗ್ರಾಮ ಕಾಯಕ ಮಿತ್ರ ಮತ್ತು ಬಿ.ಎಫ್.ಟಿ ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಕಾರ್ಮಿಕ ಹಾಜರಾತಿ ತೆಗೆದುಕೊಳ್ಳುವಾಗ ನಿಯಮ ಮೀರಿ ನಮೂದಿಸುವಂತೆ ಯಾವುದಾದರು ಅಥವಾ ಯಾರಿಂದಲಾದರೂ ಒತ್ತಡ ಬಂದಲ್ಲಿ, ನೇರವಾಗಿ ಸಂಬಂಧಿಸಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ನರೇಗಾ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಹಾಜರಾತಿಯನ್ನು ಕಡ್ಡಾಯವಾಗಿ ಎರಡು ಬಾರಿ ಆ್ಯಪ್ ಮೂಲಕ ದೃಢೀಕರಿಸಬೇಕು.  ಸೃಜಿತ ಎನ್.ಎಂ.ಆರ್ ನಂತೆ ಮಹಿಳೆಯರು ಕೆಲಸದಲ್ಲಿ ಭಾಗವಹಿಸಿರುವದನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ಕೆಲಸಕ್ಕೆ ಗೈರಾದವರ ಹಾಜರಾತಿ ನೀಡದಂತೆ ನೋಡಿಕೊಳ್ಳಬೇಕು. ನರೇಗಾ ನಿಯಮ ಮೀರಿ ಹಾಜರಾತಿಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಅಂತಹ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಲಾಗುವುದು ಎಂದು ತಿಮ್ಮಪ್ಪ ಎಚ್ಚರಿಸಿದರು.

 

ಜಿಲ್ಲೆಯಲ್ಲಿ ಸೋಷಿಯಲ್ ಆಡಿಟ್ ಆಕ್ಷೇಪಣೆಯ 46,000 ಕಂಡಿಕೆಗಳು ಬಾಕಿ ಇದ್ದು, ತ್ವರಿತ ತಿರುವಳಿ ಮಾಡಿ ಮುಕ್ತಾಯಗೊಳಿಸಲು ತಿಳಿಸಿದರು.
ಹಿರಿಯೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್ ಮಾತನಾಡಿ, ನರೇಗಾ ಅನುಷ್ಠಾನದ ಪಾರದರ್ಶಕತೆಗೆ ಮುಂದುವರೆದ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ, ಹಾಗಾಗಿ ಉತ್ತಮ ಹಾಗೂ ಗುಣಮಟ್ಟದ ಅನುಷ್ಠಾನಕ್ಕೆ ಹೆಚ್ಚಿನ ಗಮಹರಿಸಬೇಕಿದೆ.  ಕಾಮಗಾರಿ ಅನುಷ್ಠಾನದ ತಳಹಂತದಲ್ಲಿ ಸಂಬಂಧಿಸಿದ ಸಿಬ್ಬಂದಿಗಳು, ಕಾರ್ಮಿಕ ಗುಂಪು ರಚಿಸುವಲ್ಲಿ ಮತ್ತು ಕೆಲಸದ ಹಾಜರಾತಿ ತೆಗೆದುಕೊಳ್ಳುವಲ್ಲಿ ಪ್ರಮುಖರಾಗಿರುತ್ತಾರೆ, ತದನಂತರ ತಾಂತ್ರಿಕ ಸಹಾಯಕರು, ಇನ್ನೂ ಮುಂದುವರೆದು ಮೇಲುಸ್ತುವಾರಿಗೆ ಪಿಡಿಒ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಇದ್ದು ಗಮನಹರಿಸುತ್ತಾರೆ ಎಂದರು.

ಚಿತ್ರದುರ್ಗ ತಾ. ಪಂ. ಇಒ ರವಿಕುಮಾರ್ ಮಾತನಾಡಿ, ತಾಂತ್ರಿಕ ಸಹಾಯಕರು ತಮ್ಮ ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಆಕ್ಷೇಪಣೆ ಇರುವ ಕಾಮಗಾರಿಗಳ ಪೂರಕ ಮಾಹಿತಿ ಕ್ರೋಢೀಕರಿಸಿ ಸಮಿತಿ ಸಭೆಗೆ ಸಲ್ಲಿಸಿ, ತಿರುವಳಿ ಮಾಡಿಸಿ, ಪ್ರಕರಣ, ಕಂಡಿಕೆಗಳನ್ನು ಮುಕ್ತಾಯಗೊಳಿಸಬೇಕು. ಸರ್ಕಾರದಿಂದ ನರೇಗಾಕ್ಕೆ ಸಂಬಂಧಿಸಿದಂತೆ ಎರಡು ತಿಂಗಳಿಗೆ ಒಮ್ಮೆ ಸಾಮಗ್ರಿ ಹಣ ಪಾವತಿ ಆಗುತ್ತಿದ್ದು, ಕಾಮಗಾರಿಗಳ ಮುಕ್ತಾಯದ ಪ್ರಗತಿ ನೂರು ಪ್ರತಿಶತ ಸಾಧನೆಯಾಗಬೇಕು. ಇನ್ನೂ ಜಿಯೋ ಟ್ಯಾಗ್‍ನ ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದವರ ಸಹಾಯ ಪಡೆದು ತ್ವರಿತ ಕ್ಲಿಯರೆನ್ಸ್ ಮಾಡುವಂತೆ ಸೂಚಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಚಿತ್ರದುರ್ಗ ತಾ.ಪಂ. ಇ.ಒ. ವೈ. ರವಿಕುಮಾರ್, ಹಿರಿಯೂರು ಇ ಒ ಜಿ.ಎಸ್. ಸತೀಶ್ ಕುಮಾರ್, ಜಿ. ಪಂ. ಕಚೇರಿಯ ಮೋಹನ್, ಸಹಾಯಕ ನಿರ್ದೇಶಕರಾದ ಹೆಚ್ ಎರ್ರಿಸ್ವಾಮಿ ಮತ್ತು ಶಿವಮೂರ್ತಿ ಕೆ, ತಾಂತ್ರಿಕ ಸಂಯೋಜಕರು, ಎಂಐಎಸ್ ಸಂಯೋಜಕರು, ತಾಲ್ಲೂಕು ಐಇಸಿ ಸಂಯೋಜಕರು, ಎರಡೂ ತಾಲ್ಲೂಕಿನ ತಾಂತ್ರಿಕ ಸಹಾಯಕರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *