ಶಿವಮೊಗ್ಗ: ಅಡಿಕೆ ಬೆಳೆಯಿಂದ ಒಳ್ಳೆ ಲಾಭವೇನೋ ಬರುತ್ತೆ. ಆದರೆ ಅದನ್ನ ಯಾವುದೇ ರೋಗ ಬರದಂತೆ ಕಾಪಾಡುವುದೇ ದೊಡ್ಡ ಸವಾಲಿನ ಕೆಲಸ. ಮಲೆನಾಡಿನ ಭಾಗದ ಹೆಚ್ವಿನ ರೈತರು ಅಡಿಕೆ ಬೆಳೆಯನ್ನೇ ನಂಬಿಕೊಂಡಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಅಡಿಕೆಗೆ ಕೊಳೆ ರೋಗ, ಎಲೆ ಚುಕ್ಕಿ ರೋಗ ಬಂದಿತ್ತು. ಇದರಿಂದ ಕಂಗೆಟ್ಟಿದ್ದ ರೈತರು ಇದೀಗ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೆಚ್ಚಾಗಿದೆ.
ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾದ ಪರಿಣಾಮ ಅಡಿಕೆ ಬೆಳೆಯ ಫಸಲು ನಿರೀಕ್ಷಿಸಿದ ಮಟ್ಟಿಗೆ ರೈತರ ಕೈ ಸೇರಲಿಲ್ಲ. ಈ ಕಾರಣದಿಂದಾನೇ ಮಾರುಕಟ್ಟೆಗೂ ಅಡಿಕೆ ಕೊರತೆ ಎದುರಾಗಿತ್ತು. ಆದ್ದರಿಂದ ವಿವಿಧ ಮಾದರಿಯ ಕ್ವಿಂಟಾಲ್ ಅಡಿಕೆ ಧಾರಣೆ 50-62 ಸಾವಿರ ರೂಪಾಯಿ ತನಕ ಇದ್ದು ರೈತರು ಸಂತಸಗೊಂಡಿದ್ದಾರೆ. ಆದರೆ ಮಲೆನಾಡು ಭಾಗದಲ್ಲಿ ರೈತರು ಫಸಲಿನ ಕೊರತೆ ಎದುರಿಸುತ್ತಿದ್ದು, ದರ ಹೆಚ್ಚಿದ್ದರೂ ಮಾರಾಟ ಮಾಡುವುದಕ್ಕೆ ಅಡಿಕೆ ಲಭ್ಯವಿಲ್ಲ. ಇಂದಿನ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆ ಹೀಗಿದೆ ನೋಡಿ.
ಶಿವಮೊಗ್ಗದ ಅಡಿಕೆ ಧಾರಣೆ ಬೆಟ್ಟೆ ಅಡಿಕೆ 45,699-55,399 ರೂಪಾಯಿ ಇದೆ. ಗೊರಬಲು ಅಡಿಕೆ 18,100-26,009 ರೂಪಾಯಿ ಇದೆ ಮತ್ತು ಸರಕು 52,999-62,100 ರೂಪಾಯಿ ತನಕ ಇದೆ. ಮಲೆನಾಡು ಭಾಗದಲ್ಲು ಮೂರನೇ ಹಂತದ ಕೊಯ್ಲು ಅಂತಿಮ ಹಂತದಲ್ಲಿದೆ. ಇನ್ನು 15 ದಿನಗಳಲ್ಲಿ ಕೊಯ್ಲು ಸಂಪೂರ್ಣವಾಗಿ ಮುಗಿದು ಹೋಗುತ್ತದೆ. ಈ ಬಾರಿ ಮಲೆನಾಡು ಭಾಗದಲ್ಲಿ ಮಾತ್ರವಲ್ಲ ಬಯಲು ಸೀಮೆಯಲ್ಲೂ ಅಡಿಕೆ ಧಾರಣೆ ಕಡಿಮೆಯಾಗಿದೆ. ಹೀಗಾಗಿ ಅಡಿಕೆ ಧಾರಣೆ ಒಂದೇ ರೀತಿಯಲ್ಲಿ ಇದೆ. ಇದು ರೈತರಿಗೆ ನೆಮ್ಮದಿಯನ್ನೇ ತಂದಿದೆ. ಫಸಲು ಕಡಿಮೆ ಎಂದು ಬೇಸರ ಮಾಡಿಕೊಂಡಿದ್ದ ರೈತರಿಗೆ ಅಡಿಕೆ ಧಾರಣೆಕೊಂಚ ಸಮಾಧಾನ ತಂದಿದೆ.