Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಧಾನಿ ನರೇಂದ್ರ ಮೋದಿಯವರದ್ದು ಕೆಳ ಮಟ್ಟದ ಟೀಕೆ : ಎಎಪಿ ಜಿಲ್ಲಾಧ್ಯಕ್ಷ ಜಗದೀಶ್

---Advertisement---

ಸುದ್ದಿಒನ್, ಚಿತ್ರದುರ್ಗ, ಜನವರಿ.12 : ದೇಶದಲ್ಲಿ ಹೊಸ ಸಂಚಲನ ಉಂಟು ಮಾಡುತ್ತಿರುವ ಎಎಪಿ ಪಕ್ಷದ ಕುರಿತು ತೀವ್ರ ಆತಂಕಕ್ಕೆ ಒಳಗಾಗಿರುವ ಪ್ರಧಾನಿ ನರೇಂದ್ರ ಮೋದಿ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಖಚಿತವೆಂಬ ಕಾರಣಕ್ಕೆ ಕೆಳಮಟ್ಟದ ಟೀಕೆ ಮಾಡುತ್ತಿದ್ದಾರೆ ಎಂದು ಎಎಪಿ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಹೇಳಿದ್ದಾರೆ.

ಆಪ್‌ನಿಂದ ಜನರಿಗೆ ಆಪತ್ತು ಎಂಬ ಮೋದಿ ಅವರ ಹೇಳಿಕೆಯೇ ಅವರಲ್ಲಿನ ಭೀತಿಗೆ ಸಾಕ್ಷಿಯಾಗಿದೆ. ಚುನಾವಣೆ ಸಂದರ್ಭ ಸರ್ಕಾರವೊಂದರ ಲೋಪ ಅಥವಾ ಭ್ರಷ್ಟಾಚಾರ ಕುರಿತು ಮಾತನಾಡಲು ಎಎಪಿ 10 ವರ್ಷದ ಆಡಳಿತದಲ್ಲಿ ಎಳ್ಳಷ್ಟು ಅವಕಾಶ ಕೊಡದ ಕಾರಣಕ್ಕೆ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ ಎಂದಿದ್ದಾರೆ.

ಆಪ್‌ನಿಂದ ಜನರಿಗೆ ಆಪತ್ತು ಇಲ್ಲವೆಂಬ ಸತ್ಯ ಮೋದಿ ಅವರಿಗೂ ಗೊತ್ತಿದೆ. ಆದರೆ, ಚುನಾವಣೆಯಲ್ಲಿ ಕನಿಷ್ಠ ಮರ್ಯಾದೆ ಉಳಿಸಿಕೊಳ್ಳುವಷ್ಟು ಸ್ಥಾನ ಗಳಿಸಲು ಹೀಗೆ ಹೇಳುತ್ತಿದ್ದಾರೆ. ಪಕ್ಷದ ಸಂಸ್ಥಾಪಕ ಕೇಜ್ರಿವಾಲ್ ಅವರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದ್ದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ, ಕೋರ್ಟ್ ಹಂತದಲ್ಲಿನ ವಿಚಾರಣೆಗಳು ಕೇಜ್ರಿವಾಲ್ ಸತ್ಯವಂತ ಎಂದು ದೃಢಪಡಿಸುತ್ತಿವೆ. ಜತೆಗೆ ಈ ಬಾರಿ ಕಳೆದ ಚುನಾವಣೆಗಿಂತಲೂ ಎಎಪಿ ಹೆಚ್ಚು ಸ್ಥಾನ ಗಳಿಸಿ ದೆಹಲಿ ಗದ್ದುಗೆ ಏರುವುದು ಖಚಿತವೆಂದು ಗುಪ್ತದಳದ ಮಾಹಿತಿಯಿಂದ ಆತಂಕಕ್ಕೆ ಒಳಗಾಗಿ ನರೇಂದ್ರ ಮೋದಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ದೆಹಲಿಯಲ್ಲಿ ಹೈಟೆಕ್ ಸರ್ಕಾರಿ ಶಾಲೆಗಳು, ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿ ಅನೇಕ ಯೋಜನೆಗಳು ಇಡೀ ದೇಶಕ್ಕೆ ಮಾದರಿ ಆಗಿದೆ. ದೆಹಲಿ ಮಾದರಿ ಯೋಜನೆಗಳನ್ನು ವಿವಿಧ ರಾಜ್ಯಗಳು ಅನುಸರಿಸುತ್ತಿವೆ. ಅನೇಕ ವಿವಿ ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ತಮ್ಮ ಸಂಶೋಧನೆಗೆ ದೆಹಲಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿವೆ. ಅದರರ್ಥ ಇಡೀ ದೇಶದಲ್ಲಿಯೇ ದೆಹಲಿ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಜತೆಗೆ ಜನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುತ್ತಿದೆ ಎಂಬುದು ಅನೇಕ ಬಾರಿ ಬಹಿರಂಗಗೊಂಡಿದೆ.

ಬಾಯಿ ತೆರೆದರೆ ನಾವು ಸುಸಂಸ್ಕೃತರು ಎಂದು ಹೇಳಿಕೊಂಡು ಬೆನ್ನು ತಟ್ಟಿಕೊಳ್ಳುವ ಬಿಜೆಪಿ ನಾಯಕರು ಮಹಿಳೆಯರ ಕುರಿತು ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಸಿ.ಟಿ.ರವಿ, ದೆಹಲಿಯಲ್ಲಿ ಬಿಜೆಪಿಯ ನಾಯಕ ರಮೇಶ್ ಬಿಧೂರಿ ಅಲ್ಲಿನ ಮುಖ್ಯಮಂತ್ರಿ ಅತಿಷಿ ಅವರ ಕುರಿತು ಆಡಿರುವ ಮಾತುಗಳು ಬಿಜೆಪಿಯ ಮನಸ್ಥಿತಿಗೆ ಕೈಗನ್ನಡಿ ಆಗಿದೆ. ಮಹಿಳೆಯರು ರಾಜಕಾರಣಕ್ಕೆ ಪ್ರವೇಶ ಮಾಡಲೇಬಾರದೆಂದು ನಿಲುವು ಆಗಿದೆ ಎಂದು ದೂರಿದ್ದಾರೆ.

 

ಮಹಿಳೆ, ಮೀಸಲಾತಿ, ಸಂವಿಧಾನ, ಅಂಬೇಡ್ಕರ್ ಕುರಿತು ಸದಾ ಅಸಮಾಧಾನ ವ್ಯಕ್ತಪಡಿಸುವ ಬಿಜೆಪಿಗರಿಗೆ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿ ಬೇಕಿಲ್ಲ. ಅವರಿಗೆ ದೇಶದ ಮೂವರು ಪ್ರಮುಖ ಉದ್ಯಮಿಗಳ ಬೆಳವಣಿಗೆಯಷ್ಟೇ ಬೇಕಾಗಿದೆ ಎಂದು ಆರೋಪಿಸಿದ್ದಾರೆ.

ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂಪಾಯಿ ಹಗರಣ ನಡೆಸಿದೆ. ಈ ಕುರಿತು ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ. ಈ ಕಾರಣಕ್ಕೆ ಭೀತಿಗೆ ಬಿಜೆಪಿ ಒಳಗೊಂಡಿದೆ. ಎಲ್ಲಿ ನೋಡಿದರೂ ಭ್ರಷ್ಟಾಚಾರದಲ್ಲಿ ಬಿಜೆಪಿ ಮುಳುಗಿದೆ. ಆದರೂ ಅವರು ಮತ್ತೊಂದು ಪಕ್ಷದ ವಿರುದ್ಧ ಅನಗತ್ಯ ಟೀಕೆ ಮಾಡುವುದು ಕಾಯಿಲೆ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment