ವಿವಿಧ ಬೇಡಿಕೆ ಈಡೇರಿಸುವಂತೆ ಜನತಾದರ್ಶನದಲ್ಲಿ ಶಾಸಕ ಕೆ.ಸಿ.ವೀರೇಂದ್ರಪಪ್ಪಿಗೆ ಕರುನಾಡ ವಿಜಯಸೇನೆ ಮನವಿ

2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.04 : ಪ್ರವಾಸಿ ಮಂದಿರದಿಂದ ಹೊಳಲ್ಕೆರೆ ರಸ್ತೆ ಕನಕವೃತ್ತದವರೆಗೂ ಎರಡು ಬದಿಗಳಲ್ಲಿ ರಸ್ತೆ ಅಗಲೀಕರಣಗೊಳಿಸಿ ಪಾದಚಾರಿಗಳು, ವಯೋವೃದ್ದರು, ಮಕ್ಕಳು, ಮಹಿಳೆಯರು ಓಡಾಡಲು ಫುಟ್‍ಪಾತ್‍ಗಳನ್ನು ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರುನಾಡ ವಿಜಯಸೇನೆ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಜನತಾದರ್ಶನದಲ್ಲಿ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನಗರದ ಕೆಲವು ಭಾಗಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದು, ಗಾಂಧಿನಗರ, ನೆಹರುನಗರ, ಜೋಗಿಮಟ್ಟಿ ರಸ್ತೆ ಇನ್ನಿತರೆ ಕಡೆ ಕುಡಿಯುವ ನೀರಿನ ಘಟಕಗಳನ್ನು ತುರ್ತಾಗಿ ರಿಪೇರಿ ಮಾಡಿಸಬೇಕು. ಗಾಂಧಿವೃತ್ತದಲ್ಲಿ ಗಾಂಧಿ ಪ್ರತಿಮೆ ಪ್ರತಿಷ್ಠಾಪಿಸಿ. ವೃತ್ತವನ್ನು ವಿಶಾಲಗೊಳಿಸಬೇಕು. ಕೆಳಗೋಟೆಯ ಬಸವೇಶ್ವರ ಸರ್ಕಲ್‍ನಲ್ಲಿ ಬಸವಣ್ಣನವರ ಪುತ್ಥಳಿ ನಿರ್ಮಾಣವಾಗಬೇಕು. ತ.ರಾ.ಸು.ರಂಗಮಂದಿರದ ಹೊರ ಭಾಗದಲ್ಲಿ ತಾಯಿ ಕನ್ನಡ ಭುವನೇಶ್ವರಿ ಪ್ರತಿಮೆಯಿರಿಸಬೇಕು.

ನಗರದಿಂದ ಸುತ್ತಮುತ್ತಲ ಹಳ್ಳಿಗಳಿಗೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಅಲ್ಲಲ್ಲಿ ಬಳ್ಳಾರಿ ಜಾಲಿ ಗಿಡ ಗಂಟೆಗಳು ಬೆಳೆದಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ, ಆಟೋರಿಕ್ಷಾದವರಿಗೆ ಇನ್ನಿತರೆ ವಾಹನಗಳಿಗೆ ತೊಂದರೆಯಾಗುತ್ತಿದೆ. ಕೂಡಲೆ ತೆರವುಗೊಳಿಸಬೇಕು. ನಗರದ ಎಲ್ಲಾ ಉದ್ಯಾನವನಗಳ ಅಭಿವೃದ್ದಿ ನೆಪದಲ್ಲಿ ನಗರಸಭೆ ಹಾಗೂ ನಗರಾಭಿವೃದ್ದಿ ಪ್ರಾಧಿಕಾರದವರು ಹಣ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಕೂಡಲೆ ಕ್ರಮ ವಹಿಸಿ ಅಂತಹ ಅಧಿಕಾರಿಗಳ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಶಾಸಕರಲ್ಲಿ ಆಗ್ರಹಿಸಿದರು.

ನಗರದ ಹೊರಭಾಗದ ವಿಶಾಲವಾದ ಜಾಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿ ಕಾಲೇಜಿಗೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಹೆಸರಿಡಬೇಕು.
ಜಿಲ್ಲಾಸ್ಪತ್ರೆಯನ್ನು ಎಲ್ಲಿಗೂ ಸ್ಥಳಾಂತರಿಸಬಾರದು. ರಾಜಕಾಲುವೆಗಳ ಮೇಲೆ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿಕೊಂಡಿರುವುದನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ನಗರದ ಕೆಲವು ಕಡೆ ಅವೈಜ್ಞಾನಿಕವಾಗಿ ಹಂಪ್ಸ್‍ಗಳನ್ನು ಅಳವಡಿಸಿರುವುದನ್ನು ತೆಗೆದು ಸಂಚಾರ ದಟ್ಟಣೆಯಿರುವ ಕಡೆ ಮಾತ್ರ ಅಳವಡಿಸತಕ್ಕದ್ದು. ಆರರಂದು ಚಿತ್ರದುರ್ಗ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕವಾಡಿಗರಹಟ್ಟಿಗೆ ಭೇಟಿ ನೀಡಿ ಅಲ್ಲಿನ ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿ ಅಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು.

ನಗರದಲ್ಲಿ ಕೆಲವು ಕಡೆ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ತುರ್ತಾಗಿ ಕಾಮಗಾರಿಯನ್ನು ಮುಗಿಸಬೇಕು. ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸುವಲ್ಲಿ ಈಗಾಗಲೆ ವಿಳಂಭವಾಗಿದ್ದು, ಕೂಡಲೆ ಮೀಸಲಾತಿಯನ್ನು ಪ್ರಕಟಿಸಿ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಲು ಅವಕಾಶ ಕೊಡಬೇಕೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಶಾಸಕರಲ್ಲಿ ವಿನಂತಿಸಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಕಾರ್ಯದರ್ಶಿ ಜಗದೀಶ್, ರತ್ನಮ್ಮ, ಪ್ರದೀಪ್, ಅವಿನಾಶ್, ಅಭಿಷೇಕ್, ಕೋಟೇಶ್, ಸುರೇಶ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks