ಸಮಾಜವನ್ನು ಜಾಗೃತಿಗೊಳಿಸಲು ಸೃಜನಶೀಲ ಸಾಹಿತ್ಯ ರಚನೆ ಅಗತ್ಯ : ಬಿ.ಕೆ.ರಹಮತ್‍ವುಲ್ಲಾ

2 Min Read

ಸುದ್ದಿಒನ್, ಚಿತ್ರದುರ್ಗ, (ಆ.06) : ಸಮಾಜವನ್ನು ಜಾಗೃತಿಗೊಳಿಸಲು ಸೃಜನಶೀಲ ಸಾಹಿತ್ಯ ರಚನೆ ಆಗಬೇಕು ಎಂದು ಖ್ಯಾತ ವಕೀಲ ಬಿ.ಕೆ.ರಹಮತ್‍ವುಲ್ಲಾ ಹೇಳಿದರು.

ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ರೋಟರಿ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಿಂಗಳ ವಿಶೇಷ ವ್ಯಕ್ತಿ ಪರಿಚಯ, ಕವಿಗೋಷ್ಟಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬರಹಗಾರರಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಸಾಹಿತ್ಯ ರಚನೆ ಮಾಡಬೇಕು. ಕ್ರಾಂತಿಕಾರಿಕ ಬರಹಗಳಿಂದ ದೇಶ ಸ್ವಾತಂತ್ರ್ಯ ಗಳಿಸಲು ಸಹಕಾರಿಯಾಗಿದೆ. ಸಮಾಜದ ಪ್ರತಿ ಕ್ಷೇತ್ರವೂ ಪ್ರಗತಿಪರವಾಗಿ ಅಭಿವೃದ್ದಿ ಕಾಣಲು ವಿಮರ್ಶಾತ್ಮಕ ಸಾಹಿತ್ಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಸಾಹಿತ್ಯ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಮೂಲ ಪ್ರತಿಭಾವಂತ ಬರಹಗಾರರನ್ನು ಸಮಾಜಕ್ಕೆ ಪರಿಚಯಿಸುವ ಅಗತ್ಯ ಇದೆ ಎಂದು ಹೇಳಿದರು.

ತಿಂಗಳ ವಿಶೇಷ ಅತಿಥಿ, ಉಪನ್ಯಾಸಕಿ ರೇಣುಕಾಪ್ರಕಾಶ್ ಮಾತನಾಡಿ, ಆಂತರಿಕ ದೃಷ್ಟಿಕೋನದಲ್ಲಿ ಸಮಾಜದ ಸೌಂದರ್ಯ ಕಾಣಬೇಕಿದೆ. ಲೋಕಾನುಭವ ಅರ್ಥೈಸಿಕೊಳ್ಳಲು ಹಿರಿಯರ ಸಾಹಿತ್ಯ ಮತ್ತು ಬದುಕಿನ ಆದರ್ಶವನ್ನು ಅನುಸರಣೆ ಮಾಡಬೇಕು. ಪ್ರತಿಯೊಬ್ಬರಿಗೂ ನೈತಿಕ ಜವಾಬ್ದಾರಿ ಇದೆ ಎನ್ನುವ ಭಾವನೆಯಲ್ಲಿ ಸಮಾಜದ ವಿವಿಧ ವರ್ಗಗಳ ಸಂಬಂಧ ಕಾಣಬೇಕಿದೆ. ಸಾಹಿತ್ಯ ಸಂಘಟನೆಗಳ ಸಂಬಂಧದಿಂದ ಸತ್ವಯುತ ಬರಹದ ಸ್ಥೈರ್ಯ ಕಂಡುಕೊಳ್ಳಲು ಕಾರಣವಾಗುತ್ತದೆ ಎಂದು ಹೇಳಿದರು.

ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಸಮಾಜದಲ್ಲಿ ಗತಿಸುವ ಘಟನೆಗಳಿಗೆ ಕವಿ ಮನಸ್ಸು ದ್ವನಿಯಾಗಬೇಕು. ಪ್ರಾಕೃತಿಕ ಸೌಲಭ್ಯದಲ್ಲೂ ಸಮಾನತೆ ಇಲ್ಲದೆ ಜೀವ ಕಳೆದುಕೊಳ್ಳುವ ಕವಾಡಿಗರಹಟ್ಟಿಯಂತಹ ದುರಂತಕ್ಕೆ ಮನ ಮಿಡಿಯಬೇಕು. ಸ್ವಾತಂತ್ರ್ಯ ಭಾರತದಲ್ಲಿ ಇಂದಿಗೂ ಪುರುಷ ಪ್ರಧಾನ ದಬ್ಬಾಳಿಕೆಯಲ್ಲಿ ಮಹಿಳೆಯರನ್ನು ಹಿಂಸಿಸುತ್ತಿರುವ ತಲ್ಲಣಗಳ ಬಗ್ಗೆ ದನಿ ಎತ್ತಬೇಕಿದೆ ಎಂದರು.

ಚಿನ್ಮೂಲಾದ್ರಿ ಸಂಸ್ಥಾಪಕಿ ಆರ್. ದಯಾಪುತ್ತೂರ್ಕರ್, ಕವಿ ಎಂ. ಜಬೀವುಲ್ಲಾ ಅಸದ್, ಡಾ. ಚಾಂದನಿ ಖಲೀದ್, ಶಿಕ್ಷಕಿ ಪುಷ್ಪವಲ್ಲಿ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಸ್. ಕಾಂತರಾಜ್ ಮಾತನಾಡಿದರು.

ಬಳಿಕ ನಡೆದ ಕವಿಗೋಷ್ಟಿಯಲ್ಲಿ ಸತ್ಯಪ್ರಭವಸಂತಕುಮಾರ್, ಶೋಭಾ ಮಲ್ಲಿಕಾರ್ಜುನ, ಜಯದೇವಮೂರ್ತಿ, ಶಿವರುದ್ರಪ್ಪ ಪಂಡರಹಳ್ಳಿ, ಕೆ.ಎಸ್. ತಿಪ್ಪಮ್ಮ, ಮಹಮ್ಮದ್ ಸಾದತ್, ತಿಪ್ಪೀರಮ್ಮ, ಮೆಹಬೂಬಿ, ಕೆ.ಎಚ್. ಜಯಪ್ರಕಾಶ್, ಸುಜಾತ ಪ್ರಾಣೇಶ್, ಬಬ್ಬೂರು ತಿಪ್ಪೀರನಾಯಕ, ದೀಪಿಕಾ ಬಾಬು, ನಿರ್ಮಲ ಮಂಜುನಾಥ್, ಮಂಜಮ್ಮ ತಿಮ್ಮಶೆಟ್ರು, ಪ್ರಹ್ಲಾದ್, ಲೋಕೇಶ್, ಕೆ.ಬಿ. ಮಹೇಶ್, ಇಂಗಳದಾಳು ತಿಮ್ಮಯ್ಯ ಸೇರಿ 20ಕ್ಕೂ ಹೆಚ್ಚು ಕವಿಗಳು ಕವಿತೆ ವಾಚನ ಮಾಡಿದರು.

ಡಾ. ಎಸ್.ಎಸ್. ಶಫೀವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಶೋಭಾ ಮಲ್ಲಿಕಾರ್ಜುನ ಪ್ರಾರ್ಥನೆ ಮಾಡಿದರು. ಮೀರಾನಾಡಿಗ್ ಸ್ವಾಗತ ಕೋರಿ, ಪ್ರವೀಣ್ ಬೆಳಗೆರೆ ಕಾರ್ಯಕ್ರಮ ನಿರೂಪಣೆ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *