ಬೋಧನೆ ಮತ್ತು ನಟನೆ ನಾಣ್ಯದ ಎರಡು ಮುಖಗಳಿದ್ದಂತೆ : ಡಾ.ಎ.ಜಿ.ಬಸವರಾಜಪ್ಪ

1 Min Read

 

ಸುದ್ದಿಒನ್, ಚಿತ್ರದುರ್ಗ,( ಜು.21): ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಗಳೂ ರಂಗಕಲೆಯನ್ನು ಅರಿತಿರಬೇಕು. ಬೋಧನೆ ಮತ್ತು ನಟನೆ ನಾಣ್ಯದ ಎರಡು ಮುಖಗಳಿದ್ದಂತೆ. ಕಲಿಕೆ ಎಂಬುದು ನಿರಂತರವಾಗಿರಬೇಕು. ಪ್ರಶಿಕ್ಷಣಾರ್ಥಿಗಳು ಶಾಲಾಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಬೇಕು. ಜೊತೆಗೆ ರಾಷ್ಟ್ರವನ್ನು ಬಲಿಷ್ಠಗೊಳಿಸುವ ಶಕ್ತಿಯನ್ನು ತುಂಬಬೇಕು ಎಂದು ಪ್ರಾಚಾರ್ಯ ಡಾ.ಎ.ಜಿ.ಬಸವರಾಜಪ್ಪ ತಿಳಿಸಿದರು.

ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ನಗರದ ಕೋಟೆರಸ್ತೆಯ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಶಿಕ್ಷಣದಲ್ಲಿ ರಂಗಕಲೆ ವಿಷಯವಾಗಿ ಪ್ರಾಯೋಗಿಕ ರಂಗಭೂಮಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಉಪಯುಕ್ತವಾಗುವ ಪಠ್ಯಾಧಾರಿತ ವಿಷಯಗಳನ್ನು ರಂಗ ಚಟುವಟಿಕೆಗಳ ಮೂಲಕ ಬೋಧನೆಗೆ ತೊಡಗಿದರೆ ಆಸಕ್ತಿದಾಯಕ ಕಲಿಕೆ ಬೌದ್ಧಿಕ ಮಟ್ಟವನ್ನು ಪ್ರಬುದ್ಧಮಾನವಾಗಿ ಬೆಳೆಸಲು ಅನುಕೂಲವಾಗುತ್ತದೆ. ಮಕ್ಕಳಲ್ಲಿ ಸದಾ ಆಸಕ್ತಿದಾಯಕ ಚಟುವಟಿಕೆಗಳಿಗೆ ರಂಗಭೂಮಿ ಕ್ಷೇತ್ರ ಪೂರಕವಾಗಿದೆ ಎಂದರು.

ಉಪಪ್ರಾಚಾರ್ಯ ಡಾ.ಕೆ. ಮೋಹನ್‍ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಂಗಭೂಮಿಯು ಅಂತರಂಗ ಮತ್ತು ಬಹಿರಂಗ ಎರಡನ್ನೂ ಸದಾ ಉತ್ಸಾಹದಲ್ಲಿಡುವ ಸೃಜನಾತ್ಮಕ ಮತ್ತು ಕ್ರಿಯಾಶೀಲ ಕಲೆಯಾಗಿದೆ ಎಂದರು.

ರಂಗಕಲೆ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ರಂಗಭೂಮಿಯ ಪ್ರಾಯೋಗಿಕ ಶಿಸ್ತುಕ್ರಮಗಳ ಅವಕಾಶಗಳನ್ನು ಹೆಚ್ಚಾಗಿ ಪಡೆದುಕೊಳ್ಳಬೇಕು. ಶಾಲಾ ಶಿಕ್ಷಣ ಇಲಾಖೆಯ ನಲಿಕಲಿ, ಚಿಗುರು, ಗ್ರಹಿಕೆ, ಕಲ್ಪನೆ ಮುಂತಾದ ಪರಿಣಾಮಕಾರಿ ಬೋಧನೆಗಳನ್ನು ಅಭ್ಯಾಸ ಮಾಡಬೇಕು ಎಂದರು.

ಉಪನ್ಯಾಸಕರಾದ ಮಹಾಂತೇಶ.ಇ, ಬಿ.ಪಾತಲಿಂಗಪ್ಪ, ಬಿ.ಎಸ್.ನಟರಾಜ, ಎಂ.ಸ್ವಾತಿ ಪಾಳೇಗಾರ, ಬಿ.ಹೇಮಲತ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.

ನೀನಾಸಂ ಪದವೀಧರ ಹಾಗೂ ರಂಗನಿರ್ದೇಶಕ ಕೆಪಿಎಂ. ಗಣೇಶಯ್ಯ ಮಾರ್ಗದರ್ಶನದಲ್ಲಿ ಶಿಕ್ಷಣದಲ್ಲಿ ರಂಗಕಲೆಗೆ ಸಂಬಂಧಿಸಿ, ಪ್ರಾಯೋಗಿಕ ರಂಗಭೂಮಿ ತರಬೇತಿ ಪಡೆದ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಶೈಕ್ಷಣಿಕ ಪಠ್ಯಕ್ರಮಕ್ಕೆ ಅನುಗುಣವಾಗಿ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ತಂಡಗಳನ್ನು ರಚಿಸಿಕೊಂಡರು.

ಕ್ರಮವಾಗಿ ಶೈಕ್ಷಣಿಕ ಗುಣಮಟ್ಟಕ್ಕೆ ಮಾರಕವಾದ ಬಾಲ್ಯವಿವಾಹ, ಜೂಜಾಟ, ಕಂಪ್ಯೂಟರ್‍ಯುಗ ಹಾಗೂ ಬಾಲಕಾರ್ಮಿಕ ರೂಪಕ ಪ್ರದರ್ಶನಗಳನ್ನು ನೀಡಿದರು. ಸುಷ್ಮ ಮತ್ತು ಅನುಷಾ ಪ್ರಾರ್ಥಿಸಿದರು. ಮಹಾಂತೇಶ್ ವಂದಿಸಿದರು. ಆರ್.ಕೃಷ್ಣ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *