ಮಾರ್ಚ್ 4 ರಂದು ದಾವಣಗೆರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ : ಬಿ.ಇ.ಜಗದೀಶ

2 Min Read

ವರದಿ ಮತ್ತು ಫೋಟೋ ಕೃಪೆ                          ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ಮಾ.4 ರಂದು ದಾವಣಗೆರೆಗೆ ಆಗಮಿಸಲಿದ್ದು, ಚಿತ್ರದುರ್ಗ ಜಿಲ್ಲೆಯಿಂದ ಐದರಿಂದ ಹತ್ತು ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ಕರ್ನಾಟಕ ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಇ.ಜಗದೀಶ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್‍ಸಿಂಗ್ ಮಾನ್‍ರವರು ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬುದು ಆಮ್ ಆದ್ಮಿ ಪಾರ್ಟಿಯ ಉದ್ದೇಶ.

ದೆಹಲಿ ಮಾದರಿಯಲ್ಲಿ ರಾಜ್ಯದಲ್ಲಿಯೂ ಆರೋಗ್ಯ ಶಿಕ್ಷಣ, ಆಹಾರ ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು. ಅಂಬೇಡ್ಕರ್ ಸಂವಿಧಾನದಂತೆ ದೇಶ ಅಭಿವೃದ್ದಿಯಾಗುತ್ತಿಲ್ಲ. ಬಿಜೆಪಿ.ಯವರು ಐ.ಡಿ. ಮತ್ತು ಇ.ಡಿ.ಯನ್ನು ದುರುಪಯೋಗಪಡಿಸಿಕೊಂಡು ದೆಹಲಿ ಉಪ ಮುಖ್ಯಮಂತ್ರಿಯನ್ನು ಬಂಧಿಸಿರುವುದನ್ನು ವಿರೋಧಿಸಿ ಹೋರಾಟ ಮಾಡುತ್ತೇವೆ. ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿರುವುದನ್ನು ಕಂಡು ಸಹಿಸಿಕೊಳ್ಳಲು ಆಗದ ಬಿಜೆಪಿ. ವಿನಾ ಕಾರಣ ತೊಂದರೆ ಕೊಡುತ್ತಿದೆ ಎಂದು ಕಿಡಿ ಕಾರಿದರು.

ಮುಂದುವರೆದವರಿಗೆ ಅನುಕೂಲ ಮಾಡಿ ಹಿಂದುಳಿದವರನ್ನು ತುಳಿಯುತ್ತಿರುವ ಬಿಜೆಪಿ.ಪಕ್ಷಪಾತ ರಾಜಕಾರಣ ಮಾಡುತ್ತಿರುವುದನ್ನು ಜನತೆಗೆ ತಿಳಿಸುವುದಕ್ಕಾಗಿ ಅರವಿಂದ ಕ್ರೇಜಿವಾಲರವರು ದಾವಣಗೆರೆಗೆ ಆಗಮಿಸುತ್ತಿದ್ದು, ಪ್ರದಾನಿ ಮೋದಿರವರ ಸಣ್ಣತನದ ರಾಜಕಾರಣವನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲಾಗುವುದು.

ಶಿವಮೊಗ್ಗಕ್ಕೆ ಆಗಮಿಸಿದ್ದ ನರೇಂದ್ರ ಮೋದಿರವರು ಅಭಿವೃದ್ದಿ ಬಗ್ಗೆ ಮಾತನಾಡುವುದನ್ನು ಬಿಟ್ಟು ಲಿಂಗಾಯಿತ ಮತಗಳನ್ನು ಸೆಳೆಯುವುದಕ್ಕಾಗಿ ಎಸ್.ನಿಜಲಿಂಗಪ್ಪ ಹಾಗೂ ವೀರೇಂದ್ರಪಾಟಿಲ್‍ರನ್ನು ಬಣ್ಣಿಸುವ ಅಗತ್ಯವಿರಲಿಲ್ಲ ಎಂದು ವ್ಯಂಗ್ಯವಾಡಿದರು.

ನಗರದ ಸ್ಲಂಗಳಲ್ಲಿರುವ ಹದಿನೈದರಿಂದ ಇಪ್ಪತ್ತು ಸಾವಿರ ಕುಟುಂಬಗಳಿಗೆ ವಾಸಿಸಲು ಸ್ವಂತ ಮನೆಗಳಿಲ್ಲ. ಶಾಸಕರು ತಮ್ಮ ಹಿಂಬಾಲಕರುಗಳಿಗೆ ಮನೆಗಳನ್ನು ನೀಡಿದ್ದಾರೆಯೇ ವಿನಃ ನಿಜವಾದ ಬಡವರಿಗಲ್ಲ. ನಾವುಗಳು ಬಡತನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಬುಲೆಟ್ ಟ್ರೈನ್, ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ ಇವುಗಳೆಲ್ಲಾ ಸಿರಿವಂತರಿಗೆ ಬೇಕು. ಬಡವರಿಗಲ್ಲ. ಬಂಡವಾಳಶಾಹಿಗಳು, ಉದ್ಯಮಿಗಳ ಪರವಾಗಿರುವ ಕೋಮುವಾದಿ ಬಿಜೆಪಿ.ಯಿಂದ ದೇಶ ಹೇಗೆ ಅಭಿವೃದ್ದಿ ಕಾಣಲು ಸಾಧ್ಯ ಎಂದು ಪ್ರಶ್ನಿಸಿದರು.

ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಫಾರೂಖ್, ಜಿಲ್ಲಾ ಜಂಟಿ ಕಾರ್ಯದರ್ಶಿ ಕೆಂಚಪ್ಪ, ಉಪಾಧ್ಯಕ್ಷ ಲಕ್ಷ್ಮಿಕಾಂತರೆಡ್ಡಿ ಪತ್ರಿಕಾಗೋಷ್ಠಿಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *