ದಾವಣಗೆರೆ.ಆಗಸ್ಟ್.25: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಗೆ ಸಂಬಂಧಿಸಿದಂತೆ ಕುಟುಂಬದ ಯಜಮಾನಿಯರು ನೋಂದಣಿ ಸೌಲಭ್ಯ ಪಡೆಯಲು ‘ಸೇವಾ ಸಿಂಧು’ ಹಾಗೂ ‘ಗ್ರಾಮ ಒನ್’ ಕೇಂದ್ರಗಳಲ್ಲಿ ನೋಂದಣಿ ಮಾಡುವ ಸಂದರ್ಭದಲ್ಲಿ, ಕೆಲವರು ಸೌಲಭ್ಯ ಕೊಡಿಸುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಪಡೆಯುತ್ತಿರುವುದು ದೂರುಗಳಿಂದ ತಿಳಿದುಬಂದಿದೆ.
ಆದ್ದರಿಂದ, ಮಹಿಳೆಯರು ಯಾವುದೇ ರೀತಿಯ ಅಮಿಷಗಳಿಗೆ ಒಳಗಾಗಬಾರದು. ಒಂದು ವೇಳೆ ಯಾರಾದರೂ ಹಣಕ್ಕಾಗಿ ಬೇಡಿಕೆ ಇಟ್ಟಲ್ಲಿ, ತಕ್ಷಣವೇ ಸಂಬಂಧಪಟ್ಟ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಅಥವಾ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಇವರಿಗೆ ನೇರವಾಗಿ ದೂರು ನೀಡಬಹುದು.
ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಯರು ಪ್ರತಿ ಮಾಹೆ ಮಂಜೂರಾಗಿ ಪಡೆಯುತ್ತಿರುವ ಸಹಾಯಧನವನ್ನು ರದ್ದುಪಡಿಸಲು ಬಯಸಿದಲ್ಲಿ, ಸ್ವಯಂಪ್ರೇರಿತರಾಗಿ ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಾನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ









