ಚಿತ್ರದುರ್ಗ. ಮೇ.19: ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಬ್ರಹ್ಮಾವರದಲ್ಲಿ 2026-27ನೇ ಶೈಕ್ಷಣಿಕ ವರ್ಷದ ಎರಡು ವರ್ಷಗಳ ಡಿಪ್ಲೊಮಾ ಕೃಷಿ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 12 ಅರ್ಜಿ ಸಲ್ಲಿಸಲು ಕೊನೆಯ ದಿನ.
ಡಿಪ್ಲೊಮಾ ಕೃಷಿ ಕೋರ್ಸ್ ಅನ್ನು ಕನ್ನಡ ಮಾಧ್ಯಮದಲ್ಲಿ ಸೆಮಿಸ್ಟರ್ (4 ಸೆಮಿಸ್ಟರ್) ಪದ್ಧತಿಯಲ್ಲಿ ಬೋಧಿಸಲಾಗುತ್ತದೆ. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಅಭ್ಯಸಿಸಿ, ಕನಿಷ್ಠ ಶೇ. 45 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಪ.ಜಾ, ಪ.ಪಂ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಕನಿಷ್ಠ ಶೇ. 40 ರಷ್ಟು ಅಂಕ ನಿಗದಿಪಡಿಸಲಾಗಿದೆ. ದಿನಾಂಕ: 12-০6-2026 ರಂದು ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಮೀರಿರಬಾರದು. ಒಟ್ಟು ಸೀಟುಗಳಲ್ಲಿ ಶೇ.50 ರಷ್ಟು ಸೀಟುಗಳನ್ನು ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಮೀಸಲಿಡಲಾಗಿದೆ.
ಅರ್ಜಿ ಸಲ್ಲಿಸಲು ಇಚ್ಛಿಸುವವರು ಅಧಿಸೂಚನೆ ಮತ್ತು ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ವೆಬ್ಸೈಟ್ www.uahs.edu.in ನಿಂದ ದಿನಾಂಕ: 12-05-2026 ರಿಂದ 12-06-2026 ರವರೆಗೆ ಡೌನ್ಲೋಡ್ ಮಾಡಿಕೊಳ್ಳಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 500 ಹಾಗೂ ಪ.ಜಾ/ಪ.ಪಂ/ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ. 250 ಅರ್ಜಿ ಶುಲ್ಕ ನಿಗದಿಯಾಗಿದೆ. ನಿಗದಿತ ಶುಲ್ಕದ ಡಿ.ಡಿ.ಯನ್ನು ರಾಷ್ಟ್ರೀಕೃತ ಬ್ಯಾಂಕ್ನಿಂದ “Comptroller, KSNUAHS, Shivamogga – 577 412 ಇವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಇರುವಕ್ಕಿ ಆವರಣ- 577 412 ಇಲ್ಲಿಗೆ ದಿನಾಂಕ: 12-06-2026ರ ಸಂಜೆ 4 ಗಂಟೆಯೊಳಗೆ ತಲುಪುವಂತೆ ಕಳುಹಿಸಬೇಕು. ನಿಗದಿತ ಅವಧಿಯ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ರೋಸ್ಟರ್ ಪದ್ಧತಿಯ ಆಧಾರದ ಮೇಲೆ ಪ್ರವೇಶಾತಿಗೆ ಆಯ್ಕೆ ಮಾಡಲಾಗುವುದು ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















